![ತೋಟದ ಕೆಲಸಗಾರರಿಂದಲೇ ಮನೆಯೊಡತಿಯ ಕೊಲೆಗೆ ಸಂಚು - ಚಿನ್ನ , ನಗದು ದರೋಡೆಗೆ ಯತ್ನ ತೋಟದ ಕೆಲಸಗಾರರಿಂದಲೇ ಮನೆಯೊಡತಿಯ ಕೊಲೆಗೆ ಸಂಚು - ಚಿನ್ನ , ನಗದು ದರೋಡೆಗೆ ಯತ್ನ](https://lh3.googleusercontent.com/-e2d58K4XU9o/ZALFeOHReGI/AAAAAAAATUM/RvXgqecgL6kM8kvY2IvcWT2NVZWnna8fgCNcBGAsYHQ/s1600/1677903211336349-0.png)
ತೋಟದ ಕೆಲಸಗಾರರಿಂದಲೇ ಮನೆಯೊಡತಿಯ ಕೊಲೆಗೆ ಸಂಚು - ಚಿನ್ನ , ನಗದು ದರೋಡೆಗೆ ಯತ್ನ
Saturday, March 4, 2023
ಸುಳ್ಯ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮನೆಯೊಡತಿಯನ್ನೇ ಕೊಲೆಗೆತ್ನಿಸಿ ಚಿನ್ನ, ನಗದು ದರೋಡೆಗೆ ಯತ್ನಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಮಾ.2ರ ರಾತ್ರಿ ನಡೆದಿದೆ.
ವರದರಾಜ್ (30), ಸೈಜಾನ್ ಪಿ.ಪಿ. (38) ಆರೋಪಿಗಳು.
ಇವರಿಬ್ಬರೂ ಕಳೆದ ನಾಲ್ಕು ತಿಂಗಳಿನಿಂದ ಕರಿಕ್ಕಳದ ವಿಶ್ವನಾಥ್ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲದೆ ಅವರ ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಆದರೆ ಮಾ. 2ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಮನೆಯ ಮಹಡಿಯನ್ನು ಹತ್ತಿ ಮೇಲೆ ಬಂದಿದ್ದಾರೆ.
ಮಹಡಿಯಲ್ಲಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ (61)ಯವರ ಕುತ್ತಿಗೆಯನ್ನು ವರದರಾಜ್ ಅದುಮಿ ಹಿಡಿದಿದ್ದಾನೆ. ಬಳಿಕ ಆಕೆಯಲ್ಲಿ ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಅವರು ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇನ್ನೊರ್ವ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪದ ಸುರೇಶ್ ಹಾಗೂ ಕೆಲಸದ ಪ್ರೇಮಾ ಅಲ್ಲಿಗೆ ಬಂದು ಆರೋಪಿಗಳನ್ನು ಹಿಡಿಯುವಷ್ಟರಲ್ಲಿ ವರದರಾಜ್ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದಿದ್ದಾನೆ. ಪರಿಣಾಮ ಗಾಯಗೊಂಡ ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗಾಯತ್ರಿಯವರ ಪತಿ ನಡೆದಾಡುವ ಸ್ಥಿತಿಯಲ್ಲಿಲ್ಲ. ಇದನ್ನು ತಿಳಿದು ಆರೋಪಿಗಳು ಮೊದಲೇ ಸಂಚು ರೂಪಿಸಿ ಮನೆಯೊಡತಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ ಎಂದು ಗಾಯತ್ರಿ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.