-->

ಸ್ವಂತ ತಮ್ಮನನ್ನೇ ಕೊಲೆಗೈದ ಅಕ್ಕ: 8ವರ್ಷಗಳ ಬಳಿಕ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಳು ಕೊಲೆಗಡುಕಿ

ಸ್ವಂತ ತಮ್ಮನನ್ನೇ ಕೊಲೆಗೈದ ಅಕ್ಕ: 8ವರ್ಷಗಳ ಬಳಿಕ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಳು ಕೊಲೆಗಡುಕಿ


ಆನೇಕಲ್: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದು ಪರಾರಿಯಾಗಿದ್ದ ಕೊಲೆಗಡುಕಿ ಅಕ್ಕ ಹಾಗೂ ಆಕೆಯ ಪ್ರಿಯಕರ 8 ವರ್ಷಗಳ  ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಜಾಪುರ ಮೂಲದ ಭಾಗ್ಯಶ್ರೀ(38) ಹಾಗೂ ಶಂಕರಪ್ಪ ತಳವಾರ (42) ಬಂಧಿತ ಆರೋಪಿಗಳು. ಲಿಂಗರಾಜು (35) ಮೃತಪಟ್ಟ ದುದೈವಿ ತಮ್ಮ.

ರಾಯಚೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾಗ್ಯಶ್ರೀ ಆ ದಿನಗಳಲ್ಲೆ ಶಂಕರಪ್ಪ ತಳವಾರ ಎಂಬುವನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಅಷ್ಟೊತ್ತಿಗಾಗಲೇ ಶಂಕರಪ್ಪನಿಗೆ ಮದುವೆಯೂ ಆಗಿತ್ತು. ಆದರೆ ಭಾಗ್ಯಶ್ರೀಯ ಪ್ರೀತಿಯ ಬಲೆಗೆ ಸಿಲುಕಿ ಪತ್ನಿಯನ್ನು ತೊರೆದು ಈಕೆಯ ಸಹವಾಸಕ್ಕೆ ಬಿದ್ದಿದ್ದ. ಆದ್ದರಿಂದ ಇವರಿಬ್ಬರೂ ರಾಯಚೂರು ತೊರೆದು ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸ್ತವ್ಯ ಹೂಡಿದ್ದರು.

ಆದರೆ ಸಹೋದರಿಯನ್ನು ಕಾಣಲು ಬಂದ ತಮ್ಮ ಲಿಂಗರಾಜು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದ. ಇದೇ ವಿಚಾರಕ್ಕೆ ಆತ ಶಂಕರಪ್ಪನೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಭಾಗ್ಯಶ್ರೀ ಹಾಗೂ ಶಂಕರಪ್ಪ ಆಕ್ರೋಶಗೊಂಡು, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲಿಂಗರಾಜನನ್ನು ಕೊಲೆ ಮಾಡಲು ಸಂಚುರೂಪಿಸಿದ್ದರು.

ಅದರಂತೆ ಇಬ್ಬರೂ ಸೇರಿ ಲಿಂಗರಾಜುವನ್ನು ಕೊಲೆಗೈದು ಆತನ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕೈಕಾಲುಗಳನ್ನು ಹೋಟೆಲ್‌ವೊಂದರ ಹಿಂದೆ ಎಸೆದಿದ್ದಾರೆ. ಉಳಿದ ದೇಹವನ್ನು ಮಂಚನಹಳ್ಳಿ ಕೆರೆಗೆ ಎಸೆದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿಹೋಗುವ ಹಂತದಲ್ಲಿತ್ತು. ಇದೀಗ ಆನೇಕಲ್ ಠಾಣೆಯ ಪೊಲೀಸರ ತೀವ್ರ ತನಿಖೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Ads on article

Advertise in articles 1

advertising articles 2

Advertise under the article