ಪರೀಕ್ಷೆಗೆ ಓದುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು


ಕೊಡಗು: ಕಳೆದೊಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದ ನಿವಾಸಿ ವೈಷ್ಣವಿ (13) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವವಳು. ಜಿತೇಂದ್ರ ಹಾಗೂ ಅಕ್ಷತಾ ದಂಪತಿಯ ಪುತ್ರಿಯಾಗಿರುವ ವೈಷ್ಣವಿ ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ 7 ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಪರೀಕ್ಷೆ ಆರಂಭವಾದ ಒಂದು ವಾರದಿಂದಲೂ ವೈಷ್ಣವಿ ಬಹಳ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಈ ಬಗ್ಗೆ ಮನೆಯವರು ಕೇಳಿದ್ದರೂ ಯಾವುದನ್ನೂ ಹೇಳಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಭಾನುವಾರವಾಗಿರುವ ಹಿನ್ನೆಲೆಯಲ್ಲಿ ವೈಷ್ಣವಿ ಒಬ್ಬಳನ್ನೇ ಓದಿಕೊಳ್ಳುವಂತೆ ಬಿಟ್ಟು ಪಾಲಕರು ಹೊರಗೆ ಹೋಗಿದ್ದಾರೆ. ಆದರೆ ಅವರು ಮರಳಿ ಮನೆಗೆ ಬಂದ ವೇಳೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಳು. ಪುತ್ರಿಯ ಸಾವನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.‌ಈ ಘಟನೆಯ ಕುರಿತಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಆಕೆ ಖಿನ್ನತೆಗೊಳಗಾಗಿರುವ ಕಾರಣ ಇನ್ನೂ ತಿಳಿದು ಬಂದಿಲ್ಲ.
BREAKING NEWS
Loading latest news...
Join our WhatsApp Channel Powered By : Online Pudu