ಸಹಕಾರಿ ಸಂಸ್ಥೆಯಿಂದ ಅಗ್ರಿಮಾಲ್ ರಾಷ್ಟ್ರದಲ್ಲೆ ಮೊದಲು-CAMPCO ಸುವರ್ಣ ಮಹೋತ್ಸವ ಉದ್ಘಾಟಿಸಿ ಅಮಿತ್ ಶಾ

 



ಪುತ್ತೂರು: ಸಹಕಾರಿ ಸಂಸ್ಥೆಯೊಂದ ಅಗ್ರಿಮಾಲ್ ನಿರ್ಮಾಣಕ್ಕೆ ಮುಂದಾಗುತ್ತಿರುವುದು ರಾಷ್ಟ್ರದ ಸಹಕಾರಿ ರಂಗದಲ್ಲೆ ಮೊದಲು. ಸಾರ್ಥಕ 50 ವರ್ಷಗಳನ್ನು ಪೂರ್ಣಗೊಳಿಸಿದ ಕ್ಯಾಂಪ್ಕೋ ಈ ಮೂಲಕ ಕೃಷಿಕರಿಂದ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಹೇಳಿದರು.

 

ಪುತ್ತೂರಿನ ತೆಂಕಿಲದಲ್ಲಿ ಶನಿವಾರ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಮತ್ತು ಸಹಕಾರಿ ಸಮಾವೇಶ ಉದ್ಘಾಟಿಸಿ, ಪುತ್ತೂರಿನಲ್ಲಿ ಅಗ್ರಿಮಾಲ್ ಗೆ ಶಿಲಾನ್ಯಾಸ, ದಾವಣಗೆರೆಯಲ್ಲಿನ ಗೋದಾಮು ಉದ್ಘಾಟನೆ ಹಾಗು ಕ್ಯಾಂಪ್ಕೋದ ತೆಂಗಿನ ಎಣ್ಣೆ ಕಲ್ಪ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.

 

ಕರಷಿಕರಿಗೆ ಸಂಬಂಧಿಸಿದ ಎಲ್ಲ ರೀತಿಯ ಸಾಮಾಗ್ರಿಗಳು ಒಂದೇ ಸೂರಿನಡಿ ಸಿಗುವಂತಹ ಈ ಪರಿಕಲ್ಪನೆ ದೇಶದಲ್ಲೇ ವಿನೂತನ. 3 ಸಾವಿರ ಸದಸ್ಯರಿಂದ ಆರಂಭಗೊಂಡ ಕ್ಯಾಂಪ್ಕೋ ಇಂದು 1.38 ಲಕ್ಷ ಸದಸ್ಯರ ಸದೃಢ ಸಹಕಾರಿ ಸಂಸ್ಥೆಯಾಗಿದೆ. ಈ ಸಾಧನೆಗಾಗಿ ಕ್ಯಾಂಪ್ಕೋದ ಇಡೀ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ವ್ಯತಿರಿಕ್ತವಾದ ಭೌಗೋಳಿಕ ಪ್ರದೇಶವಿದ್ದರೂ ಇಲ್ಲಿನ ಕೃಷಿಕರು ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಇತ್ಯಾದಿ ಬೆಳೆಯುವ ಮೂಲಕ ಸಂಪದ್ಬರಿತ ಮಾಡಿದ್ದಾರೆ. ಅಡಕೆಯಿಂದ ಮಂಗಳೂರು ಮತ್ತು ಗುಜರಾತ್ ನಡುವೆ ನಂಟು ಬೆಳೆದಿದೆ ಎಂದರು.

 ಮುಕ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಈ ಬಾರಿಯ ಬಜೆಟ್ ನಲ್ಲಿ ಅಡಿಕೆಗೆ ವಿಶೇಷವಾದ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ ಕುಮ್ಕಿ,ಕಾನ, ಬಾಣೆ, ಸೊಪ್ಪಿನ ಬೆಟ್ಟ  ಹಕ್ಕು ನೀಡುವ ಬಗ್ಗೆಯು ನಿರ್ಧರಿಸಲಾಗುವುದು ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ ಸಹಕಾರಿ ರಂಗದಲ್ಲಿ ಇಂತಹ ಸಂಸ್ಥೆಯನ್ನು ಸ್ಥಾಪಿಸಿ 50 ವರ್ಷ ಯಶಸ್ವಿಯಾಗಿ ಮುನ್ನಡೆಸುವುದು ದೊಡ್ಡ ಸವಾಲು. ವಾರಾಣಾಸಿ ಸುಬ್ರಾಯ ಭಟ್ಟರು ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅಡಿಕೆ, ಕೊಕ್ಕೊ, ರಬ್ಬರ್ ಖರೀದಿ, ಈಗ ತೆಂಗಿನ ಕಾಯಿ ಖರೀದಿಗೆ ಮುಂದಾಗಿದೆಯಲ್ಲದೆ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ವಿ ಸುನೀಲ್ ಕುಮಾರ್, ಎಸ್ ಅಂಗಾರ, ಎಸ್ ಟಿ ಸೋಮಶೇಖರ್, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕಲ್ಲಡ್ಕ ಪ್ರಭಾಕರ ಭಟ್, ಕ್ಯಾಂಪ್ಕೋ ನಿರ್ದೇಶಕರು ಉಪಸ್ಥಿತರಿದ್ದರು.

 

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಸ್ತಾವನೆಗೈದರು. ವ್ಯವಸ್ಥಾಪಕ ನಿರ್ದೇಶಕ ಎಚ್ ಎಂ ಕೃಷ್ಣಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.