-->

ಹಿಂದೂ ಮುಖಂಡರ ಹತ್ಯೆಗೆ ಪಿಎಫ್ಐನ 'ಸರ್ವೀಸ್ ಟೀಂ'ಗೆ ಬಂಟ್ವಾಳದಲ್ಲಿ ತರಬೇತಿ: ಚಾರ್ಜ್ ಶೀಟ್ ನಲ್ಲಿತ್ತು ಭಯಾನಕ ಸತ್ಯ

ಹಿಂದೂ ಮುಖಂಡರ ಹತ್ಯೆಗೆ ಪಿಎಫ್ಐನ 'ಸರ್ವೀಸ್ ಟೀಂ'ಗೆ ಬಂಟ್ವಾಳದಲ್ಲಿ ತರಬೇತಿ: ಚಾರ್ಜ್ ಶೀಟ್ ನಲ್ಲಿತ್ತು ಭಯಾನಕ ಸತ್ಯ

ಬೆಂಗಳೂರು: ದೇಶದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಚಾರ್ಜ್‌ಶೀಟ್ ಪ್ರತಿಯನ್ನು ಎನ್‌ಐಎ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಚಾರ್ಜ್‌ಶೀಟ್‌ನಲ್ಲಿ ಆಘಾತಕಾರಿ ವಿಚಾರವೊಂದನ್ನು ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.

ಪಿಎಫ್‌ಐ ಸಂಘಟನೆ ಹಿಂದೂ ಮುಖಂಡರ ಹತ್ಯೆ ನಡೆಸುವುದಕ್ಕೆಂದೇ ನಿರ್ದಿಷ್ಟ ತಂಡ ರಚನೆ ಮಾಡಿತ್ತು. ಈ ತಂಡಕ್ಕೆ 'ಸರ್ವೀಸ್ ಟೀಂ' ಎಂದು ಹೆಸರಿಡಲಾಗಿತ್ತು. ಪಿಎಫ್‌ಐ ಮುಖಂಡರ ಸೂಚನೆಯನ್ವಯ ಈ ಟೀಂ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರವನ್ನು ಉಲ್ಲೇಖಿಸಲಾಗಿದೆ.

ಸೆಲೆಕ್ಷನ್ ಪ್ರೊಸೆಸ್ ಮೂಲಕ ಸರ್ವೀಸ್ ಟೀಂಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಸದಸ್ಯರಿಗೆ ತರಬೇತಿ ನೀಡಲಾಗಿತ್ತು. 2016ರಲ್ಲಿ ರುದ್ರೇಶ್ ಹತ್ಯೆ ಬಳಿಕ ಸರ್ವೀಸ್ ಟೀಂ ಅಸ್ತಿತ್ವಕ್ಕೆ ತರಲು ಪಿ.ಎಫ್.ಐ ರಾಜ್ಯ ಸಮಿತಿ ನಿರ್ಧಾರ ಮಾಡಿತ್ತು. ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿ ಟಾರ್ಗೆಟ್ ಮಾಡಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲು ನಿರ್ಧಾರ ಕೈಗೊಂಡಿತ್ತು ಎಂದು ಉಲ್ಲೇಖವಾಗಿದೆ.

'ಸರ್ವೀಸ್ ಟೀಂ'ನ ಮುಂದಾಳತ್ವವನ್ನು ರಾಜ್ಯ ಕಾರ್ಯಕಾರಿ ಸಮಿತಿಯ ಓರ್ವ ಸದಸ್ಯ ವಹಿಸಿದ್ದ. ಪಿಎಫ್‌ಐ ಮುಸ್ಲಿಂ ಯುವಕರಿಗೆ ವಿವಿಧ ರೀತಿಯ ಕಾರ್ಯಾಗಾರ ಕೈಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿ ಮಸೀದಿ, ಮದರಸ, ಶಾಲೆಗಳಲ್ಲಿ ಇಡುವ ಬಗ್ಗೆ ಸೂಚನೆ ನೀಡಲಾಗಿತ್ತು. ರಹಸ್ಯ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿ, ಸದಸ್ಯರ ನಡುವಿನ ಸಂವಹನ ಮಾಡಲಾಗುತ್ತಿತ್ತು.

ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಹತ್ಯೆಗಳನ್ನು ರೂಪಿಸಲಾಗುತ್ತಿತ್ತು. ಇದಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ವೀಸ್ ಟೀಂ ಸದಸ್ಯರ ನೇಮಕದ ವೇಳೆ ತೀವ್ರ ನಿಗಾ ವಹಿಸಿ, ದೈಹಿಕವಾಗಿ ಫಿಟ್ ಇದ್ದವರಿಗೆ ಮಾತ್ರ ಸದಸ್ಯರಾಗಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಮುಸ್ತಫಾ ಪೈಚಾರ್ ಮತ್ತು ಮಸೂದ್ ಸೆಲೆಕ್ಷನ್ ಪ್ರೋಸೆಸ್ ಮೂಲಕ ಸರ್ವೀಸ್ ಟೀಂಗೆ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದರು. ಇಲ್ಲಿ ಆಯ್ಕೆ ಆಗಿರುವ ಸದಸ್ಯರನ್ನು ಪಿಎಫ್‌ಐನ ಬೇರೆ ಘಟಕಗಳಿಂದ ಸಂಪೂರ್ಣವಾಗಿ ಹೊರಗಿಡಲಾಗುತ್ತಿತ್ತು ಎಂಬ ಅಂಶಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

Ads on article

Advertise in articles 1

advertising articles 2

Advertise under the article