![ಹಿಮಾಚಲ ಪ್ರದೇಶದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ ನಿಧನ ಹಿಮಾಚಲ ಪ್ರದೇಶದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ ನಿಧನ](https://lh3.googleusercontent.com/--eNFRYMrhdM/Y8IlQGqoKvI/AAAAAAAASxY/6O-iA37aSEgN8-OALFfEBVXJ9nyPBSnZgCNcBGAsYHQ/s1600/1673667899351450-0.png)
ಹಿಮಾಚಲ ಪ್ರದೇಶದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ ನಿಧನ
Saturday, January 14, 2023
ಅಹಮದಾಬಾದ್: ಹಿಮಾಚಲ ಪ್ರದೇಶದ ವೇಗದ ಬೌಲರ್ ಸಿದ್ದಾರ್ಥ್ ಶರ್ಮಾ(28) ಅವರು ವಡೋದರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದಾಗಿ ನಿಧನರಾಗಿರುವ ಸಿದ್ದಾರ್ಥ್ ಶರ್ಮಾ ಕಳೆದ ಎರಡು ವಾರಗಳಿಂದ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು. ಹಿಮಾಚಲಪ್ರದೇಶದ ಸೀನಿಯರ್ ತಂಡದ ಸದಸ್ಯರಾಗಿದ್ದ ಶರ್ಮಾ ಡಿಸೆಂಬರ್ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಬಂಗಾಳದ ವಿರುದ್ಧ ಕೊನೆಯ ಬಾರಿ ಆಡಿದ್ದರು. ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದರು. 2ನೇ ಇನಿಂಗ್ಸ್ನಲ್ಲಿ 2 ವಿಕೆಟ್ ಕಬಳಿಸಿದ್ದರು.
“ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳನ್ನು ಆಡಿರುವ ಸಿದ್ದಾರ್ಥ್ ಶರ್ಮಾ ಬರೋಡಾದ ವಿರುದ್ಧ 3ನೇ ಪಂದ್ಯವನ್ನಾಡಲು ವಡೋದರಕ್ಕೆ ತಂಡದೊಂದಿಗೆ ತೆರಳುತ್ತಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದ ವೇಳೆ ಕ್ರಿಯೇಟಿನೈನ್ ಮಟ್ಟ ಹೆಚ್ಚಾಗಿತ್ತು. ಅವರ ಕಿಡ್ನಿ ಹಾಗೂ ಇತರ ಅಂಗಾಂಗಗಳ ಮೇಲೆ ಪ್ರಭಾವಬೀರಿತ್ತು. ವೈದ್ಯರು ಅವರ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ” ಎಂದು ಹಿಮಾಚಲ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೇಳಿದ್ದಾರೆ.