![ತನ್ನಿಬ್ಬರು ಹಸುಗೂಸುಗಳೊಂದಿಗೆ ತಾಯಿ ನಾಪತ್ತೆ: ಕಾಲುವೆಯಲ್ಲಿ ಮೃತದೇಹ ಪತ್ತೆ ತನ್ನಿಬ್ಬರು ಹಸುಗೂಸುಗಳೊಂದಿಗೆ ತಾಯಿ ನಾಪತ್ತೆ: ಕಾಲುವೆಯಲ್ಲಿ ಮೃತದೇಹ ಪತ್ತೆ](https://lh3.googleusercontent.com/-Hge76a4DDFA/Y5iK9cdsGlI/AAAAAAAASaA/tYwROWUm7DUBkJI3KPhXtxicGTxhAhGsACNcBGAsYHQ/s1600/1670941422161150-0.png)
ತನ್ನಿಬ್ಬರು ಹಸುಗೂಸುಗಳೊಂದಿಗೆ ತಾಯಿ ನಾಪತ್ತೆ: ಕಾಲುವೆಯಲ್ಲಿ ಮೃತದೇಹ ಪತ್ತೆ
Tuesday, December 13, 2022
ವಿಜಯಪುರ: ಇಬ್ಬರು ಹೆಣ್ಣು ಮಕ್ಕಳ ಸಹಿತ ತಾಯಿಯೊಬ್ಬಳು ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
ರೇಣುಕಾ ಅಮೀನಪ್ಪ ಕೋನಿನ್ (26) ಹಾಗೂ ಆಕೆಯ ಪುತ್ರಿಯರಾದ ಯಲ್ಲವ್ವ (2), ಅಮೃತಾ (1) ಕಾಲುವೆಗೆ ಹಾರಿ ಮೃತಪಟ್ಟ ದುರ್ದೈವಿಗಳು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದ ರೇಣುಕಾ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಗ್ರಾಮದ ಹೊರ ಭಾಗದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಗೆ ಹಾರಿದ್ದಳು. ಕಳೆದ ಎರಡು ದಿನಗಳ ಹಿಂದೆ ಪತಿಯ ಮನೆಯಲ್ಲಿ ಜಗಳ ನಡೆದಿರುವ ಹಿನ್ನಲೆಯಲ್ಲಿ ರೇಣುಕಾ ಮನೆ ಬಿಟ್ಟು ಹೋಗಿದ್ದಳು.
ಆಕೆಗಾಗಿ ಹುಡುಕಾಟ ನಡೆದಿತ್ತು. ಆದರೆ ಎಲ್ಲೂ ಅವರು ಪತ್ತೆಯಾಗದ ಹಿನ್ನಲೆಯಲ್ಲಿ ಕುರಿತು ನಿನ್ನೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ನೀಡಲಾಗಿತ್ತು. ಇಂದು ಕಾಲುವೆಯಲ್ಲಿ ರೇಣುಕಾ ಹಾಗೂ ಓರ್ವ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು, ಇನ್ನೊಂದು ಮಗುವಿನ ಶವಕ್ಕಾಗಿ ಶೋಧ ಮುಂದುವರಿದಿದೆ. ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.