ಎಲ್ಎಲ್ ಬಿ ವಿದ್ಯಾರ್ಥಿನಿಯನ್ನು ಬೆದರಿಕೆಯೊಡ್ಡಿ ಅತ್ಯಾಚಾರಗೈದಿರುವ ಎಂಎಲ್ಎ ಪಿಎ ಸೇರಿದಂತೆ ಮೂವರು ಅರೆಸ್ಟ್



Image by Gerd Altmann from Pixabay
ಹೈದರಾಬಾದ್: ಎಲ್ಎಲ್ ಬಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದಿರುವ ಆರೋಪದ ಮೇಲೆ ತೆಲಂಗಾಣ ವಾರಂಗಲ್(ಪೂರ್ವ) ಶಾಸಕ ನರೇಂದ್ರ ನನ್ನಪುನೇನಿ‌ ಆಪ್ತಸಹಾಯಕ ಶಿವಕುಮಾರ್ ಎಂಬಾತ ಸೇರಿದಂತೆ ಮೂವರನ್ನು ಹನಮಕೊಂಡ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್ ನೊಂದಿಗೆ ಖಾಸಗಿ ಹಾಸ್ಟೆಲ್‌ನ ಮ್ಯಾನೇಜರ್ ವೇಮುಲ ಶೋಭಾ ಮತ್ತು ಆಕೆಯ ಸೋದರ ಸಂಬಂಧಿ ವೇಮುಲಾ ವಿಜಯ್ ಕುಮಾರ್ ಎಂಬಾತನ್ನು ಬಂಧಿಸಲಾಗಿದೆ. ಈ ಮೂವರ ವಿರುದ್ಧ ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ, ಎಸ್‌ಟಿ ಮತ್ತು ಎಸ್ಸಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿದ್ದಿಪೇಟೆ ಜಿಲ್ಲೆಯ ಯುವತಿ ಹನಮಕೊಂಡದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಂತಿಮ ವರ್ಷ ಓದುತ್ತಿದ್ದಳು. ಆಕೆ ಸುಬೇದಾರಿ ಏರಿಯಾದ ಖಾಸಗಿ ಹಾಸ್ಟೆಲೊಂದರಲ್ಲಿ ಉಳಿದು ವ್ಯಾಸಂಗ ಮಾಡುತ್ತಿದ್ದಳು. ಆಕೆ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದನ್ನು ಗಮನಿಸಿದ ಹಾಸ್ಟೆಲ್ ಮ್ಯಾನೇಜರ್ ಶೋಭಾ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದಾಳೆ. ಅಲ್ಲದೆ ತಾನು ಹೇಳಿದ್ದನ್ನು ಕೇಳದಿದ್ದರೆ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದ ವಿಚಾರವನ್ನು ಪಾಲಕರಿಗೆ ತಿಳಿಸುವುದಾಗಿ ಬೆದರಿಕೆಯೊಡ್ಡಿದ್ದಳು. ಶೋಭಾ ಬ್ಲಾಕ್‌ಮೇಲ್‌ಗೆ ಹೆದರಿದ ವಿದ್ಯಾರ್ಥಿನಿ ಆಕೆ ಹೇಳಿದ್ದನ್ನು ಮಾಡಲು ಒಪ್ಪಿಕೊಂಡಿದ್ದಾಳೆ.

ಒಂದು ದಿನ ಶೋಭಾ, ವಿದ್ಯಾರ್ಥಿನಿಯನ್ನು ಪಟ್ಟಣದ ಅಲಂಕಾ ಜಂಕ್ಷನ್ ಬಳಿಯ ಕೊಠಡಿ ಒಂದಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ವಿಜಯ್ ಕುಮಾರ್ ಎಂಬಾತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಸುಮಾರು ಒಂದು ತಿಂಗಳ ಕಾಲ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಆರೋಪಿಗಳು ಆಕೆಯ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ. ಬಳಿಕ ಶಾಸಕರ ಆಪ್ತ ಸಹಾಯಕ ಶಿವಕುಮಾರ್ ಗೆ ಸಹಕರಿಸದೇ ಹೋದರೆ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವೀಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. 

ಇದಾದ ಬಳಿಕ ವಿಜಯ್ ಕುಮಾರ್ ಮತ್ತು ಶೋಭಾ, ವಿದ್ಯಾರ್ಥಿನಿಯನ್ನು ನಕ್ಕಲಗುಟ್ಟದ ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಶಾಸಕರ ಪಿಎ ಶಿವಕುಮಾರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಆಕೆಯನ್ನು ಹೈದರಾಬಾದ್‌ನಲ್ಲಿ ನೆಲೆಸಿರುವ ತನ್ನ ಸ್ನೇಹಿತನ ಬಳಿಗೆ ವಿದ್ಯಾರ್ಥಿನಿಗೆ ಹೇಳಿದ್ದಾನೆ. ಇವರ ಕಿರುಕುಳ ಸಹಿಸಲಾಗದೆ ಆಕೆ ಹನಮಕೊಂಡ ಪೊಲೀಸರಿಗೆ ದೂರು ನೀಡಿದ್ದಾಳೆ. 

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಾಸ್ಟೆಲ್ ಮ್ಯಾನೇಜರ್ ಶೋಭಾ, ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಿದ್ದಾರೆ. ಎಸ್‌ಟಿ ಮತ್ತು ಎಸ್ಸಿ ತಿದ್ದುಪಡಿ ಕಾಯ್ದೆ-2015ರ ಜೊತೆಗೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ಕಿರಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಹಾಸ್ಟೆಲ್ ಮ್ಯಾನೇಜರ್ ಶೋಭಾ ಪ್ರಮುಖ ಆರೋಪಿಯಾಗಿದ್ದಾಳೆ. ಆಕೆಯನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸಿದರೆ, ಹೆಚ್ಚಿನ ವಿಚಾರಗಳು ಹೊರಬರುವ ಸಾಧ್ಯತೆ ಇದೆ ಎಂದು ಸಂತ್ರಸ್ತೆಯ ಪಾಲಕರು ಮತ್ತು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu