-->
1000938341
ಇನ್ನು ಮುಂದೆ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬ್ಯಾನ್: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶಕ್ಕೆ ಇದು ಕಾರಣ

ಇನ್ನು ಮುಂದೆ ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬ್ಯಾನ್: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶಕ್ಕೆ ಇದು ಕಾರಣ

ಚೆನ್ನೈ: ತಮಿಳುನಾಡಿನಲ್ಲಿರುವ ದೇವಾಲಯಗಳಲ್ಲಿ ಇನ್ನು ಮುಂದೆ ಮೊಬೈಲ್ ಬಳಕೆಯನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಆರ್. ಮಹದೇವನ್ ಮತ್ತು ಜೆ ಸತ್ಯನಾರಾಯಣ ಪ್ರಸಾದ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಯಾವುದೋ ಒಂದು ಉದ್ದೇಶವನ್ನು ಇರಿಸಿಕೊಂಡು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅವರ ಗಮನವನ್ನು ಈ ಮೊಬೈಲ್ ಫೋನ್‌ಗಳು ಬೇರೆಡೆಗೆ ತಿರುಗಿಸುತ್ತದೆ. ಆದ್ದರಿಂದ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುವಂತೆ ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಮೂರ್ತಿಗಳು ಸೂಚನೆ ನೀಡಿದ್ದಾರೆ.

ದೇವಸ್ಥಾನಗಳು ಶ್ರೇಷ್ಠ ಸಂಸ್ಥೆಗಳಾಗಿದೆ. ಸಾಂಪ್ರದಾಯಿಕವಾಗಿ ಪ್ರತಿಯೊಬ್ಬರ ಜೀವನದ ಕೇಂದ್ರ ಬಿಂದುವಾಗಿವೆ. ಇದು ಕೇವಲ ಪೂಜಾ ಸ್ಥಳ ಮಾತ್ರವಲ್ಲ, ಜನರ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವಂತ ಸಂಪ್ರದಾಯವಾಗಿದ್ದು, ದೇವಾಲಯವು ನೀಡುವ ದೈವಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಲು ಲಕ್ಷಾಂತರ ಭಕ್ತರನ್ನು ಇನ್ನೂ ಸೆಳೆಯುತ್ತದೆ. ದೇವಾಲಯದ ವ್ಯವಸ್ಥೆಗಳು ಮತ್ತು ರಚನೆಗಳು ಇಂತಹ ಅನುಭವಗಳನ್ನು ಬೆಂಬಲಿಸಬೇಕು. ಹೀಗಾಗಿ ತನ್ನದೇ ಆದ ನಿರ್ವಹಣಾ ಅಗತ್ಯಗಳನ್ನು ಹೊಂದಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಪೂಜೆ-ಪುನಸ್ಕಾರಗಳು ನಡೆಯುವಂತಹ ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಡೆ ಅನುಸರಿಸಲಾಗಿದೆ ಎಂದು ತಿಳಿಸಿರುವ ನ್ಯಾಯಾಲಯ, ಜನರಿಗೆ ತೊಂದರೆಯಾಗದಂತೆ ದೇವಸ್ಥಾನಗಳಲ್ಲಿ ಫೋನ್ ಠೇವಣಿ ಲಾಕರ್‌ಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದೆ. ಅಲ್ಲದೆ, ಹೈಕೋರ್ಟ್ ನೀಡಿರುವ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ಸಹ ನೇಮಿಸಲಾಗುವುದು ಎಂದು ತಿಳಿಸಿದೆ.

Ads on article

Advertise in articles 1

advertising articles 2

Advertise under the article