ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡಲು ಕರೆ: ಕಾಂಗ್ರೆಸ್ ನಾಯಕ ಅರೆಸ್ಟ್

ಭೋಪಾಲ್‌: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಕರೆ ನೀಡಿದ್ದ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕ ರಾಜಾ ಪಟೇರಿಯಾ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. 

ಮಧ್ಯಪ್ರದೇಶದ ದಾಮೊ ಜಿಲ್ಲೆಯ ಹಟಾದಲ್ಲಿರುವ  ಮನೆಯಿಂದಲೇ ರಾಜಾ ಪಟೀರಿಯಾರನ್ನು ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಬಂಧಿಸಲಾಗಿದೆ.  ಪ್ರಚೋದಿತ ಹೇಳಿಕೆ ನೀಡಿದ್ದ ಪಟೇರಿಯಾ ವಿರುದ್ಧ ಪನ್ನಾ ಜಿಲ್ಲೆಯ ಪವಾಯಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 451, 504, 505(1)(2), 206, 153-2(1)(2). ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಬಳಿಕ ಪ್ರಕರಣಕ್ಕೆ ಸೆಕ್ಷನ್ 115, 117 ಸೇರಿಸಲಾಗಿದೆ.  

ಬಂಧನದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ರಾಜಾ ಪಟೀರಿಯಾರ ಆರೋಗ್ಯ ತಪಾಸಣೆ ನಡೆಸಿ, ನ್ಯಾಯಾಧೀಶರ ಮುಂಭಾಗ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಡಿ.26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೋರ್ಟ್ ನಿಂದ ಹೊರ ಬಂದ ಬಳಿಕ ಪ್ರತಿಕ್ರಿಯೆ ನೀಡಿರುವ ಪಟೇರಿಯಾ, ''ಮೋದಿಯನ್ನು ಹತ್ಯೆ ಮಾಡಬೇಕೆಂಬ ಅರ್ಥದಲ್ಲಿ ತಾನು ಹೇಳಿಕೆ ನೀಡಿಲ್ಲ. ಚುನಾವಣೆಯಲ್ಲಿ ಸೋಲಿಸಿ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದೆ. ಗಾಂಧಿಯ ಅಹಿಂಸಾ ತತ್ವದಲ್ಲಿ ನಂಬಿಕೆ ಹೊಂದಿದ ನಾನು ಹತ್ಯೆ ಪದ ಬಳಸಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ'' ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu