-->

🛑ಬಂಟ್ವಾಳದಲ್ಲಿ ನಡೆಯಿತು ಅಮಾನುಷ ಕೃತ್ಯ!   🛑ಯುವತಿ ಜೊತೆಗೆ ಅನುಚಿತ ವರ್ತನೆ ಆರೋಪ- ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ

🛑ಬಂಟ್ವಾಳದಲ್ಲಿ ನಡೆಯಿತು ಅಮಾನುಷ ಕೃತ್ಯ! 🛑ಯುವತಿ ಜೊತೆಗೆ ಅನುಚಿತ ವರ್ತನೆ ಆರೋಪ- ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ



ಬಂಟ್ವಾಳ: ಬಸ್ಸಿನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಪ್ರಯಾಣಿಕರೋರ್ವರ ಮೇಲೆ ಬಸ್ ನಿರ್ವಾಹಕ ಸೇರಿದಂತೆ ಕೆಲವು ಮಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಲ್ಲರಪಟ್ಣ ನಿವಾಸಿ ಇಸಾಕ್ (45) ಎಂಬವರು ಹಲ್ಲೆಗೊಳಗಾದವರು. 

ಗಾರೆ ಕೆಲಸ ಮಾಡುತ್ತಿರುವ ಇಸಾಕ್ ಬುಧವಾರ ಬೆಳಗ್ಗೆ ಬಿ.ಸಿ.ರೋಡ್ ನಿಂದ ಮೂಡಬಿದಿರೆ ಕಡೆಗೆ ‘ಮಹಾ ಗಣೇಶ’ ಎಂಬ ಖಾಸಗಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಬಸ್ ನಲ್ಲಿ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸಾಕ್ ಅವರಿಗೆ ನೀಡಿದ್ದಾರೆ. ತಾನು ಇಳಿಯುವ ಸ್ಥಳದಲ್ಲಿ ಮಹಿಳೆ ಇಸಾಕ್ ಅವರಿಂದ ಬ್ಯಾಗ್ ಪಡೆದು ಬಸ್ ನಿಂದ ಇಳಿದಿದ್ದಾರೆ ಎನ್ನಲಾಗಿದೆ. ಆದರೆ ಆ ಬಳಿಕ ಬಸ್ ನಿರ್ವಾಹಕ ಇಸಾಕ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಬಸ್ ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕರೆ ಮಾಡಿ ಕೆಲವು ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. 

ಆ ಗುಂಪು ಇಸಾಕ್ ರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಈ ಹಲ್ಲೆಯಿಂದ ಅವರ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಬಳಿಕ ಹಗ್ಗವನ್ನು ಬಿಚ್ಚಿ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಾಣೆಯವರು ಪ್ರತಿಕ್ರಿಯಿಸಿ ಈ ಬಗ್ಗೆ ವಿಡಿಯೋ ಪರಿಶೀಲಿಸಲಾಗಿದೆ. ಆಸ್ಪತ್ರೆಯಿಂದ ವರದಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article