ಮಂಗಳೂರು: ಅಪ್ರಾಪ್ತ ಸೊಸೆಯನ್ನೇ ಅತ್ಯಾಚಾರಗೈದ ಆರೋಪಿಗೆ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ




ಮಂಗಳೂರು:  ಅಪ್ರಾಪ್ತ ಸೊಸೆಯನ್ನೇ ಅತ್ಯಾಚಾರಗೈದಿರುವ ಆರೋಪದಲ್ಲಿ 32 ವರ್ಷದ ವ್ಯಕ್ತಿಗೆ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ  ಹಾಗೂ 50,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್  ಎಫ್‌ಟಿಎಸ್‌ಸಿ-II (ಪೊಕ್ಸೊ) ನ್ಯಾಯಾಧೀಶ
ಕೆ.ಎಂ.ರಾಧಾಕೃಷ್ಣ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರವನ್ನೂ ನ್ಯಾಯಾಲಯ  ಘೋಷಿಸಿದೆ.

 2021ರ ಆಗಸ್ಟ್ 9ರಂದು ಸಂತ್ರಸ್ತ ವಿದ್ಯಾರ್ಥಿನಿ
ಶಾಲೆಯಿಂದ ತನ್ನ ಸ್ನೇಹಿತೆಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದಳು. ಈ ವೇಳೆ ಆರೋಪಿ ಅವರಿಬ್ಬರನ್ನು ಹಿಂಬಾಲಿಸಿದ ಆತ ಸಂತ್ರಸ್ತೆಯ ಸ್ನೇಹಿತೆಯನ್ನು ನಿಂದಿಸಿ ಅಲ್ಲಿಂದ ತೆರಳುವಂತೆ ಮಾಡಿದ್ದಾನೆ. ಬಳಿಕ ಆತ ಸಂತ್ರಸ್ತೆ ಬಳಿ ಫೋನ್ ನಂಬರ್ ಕೇಳಿದ್ದಾನೆ. ಆಕೆ ನಿರಾಕರಿಸಿ ಮುಂದೆ ಹೋಗಿದ್ದಾಳೆ. ಆಗ ಆತ ತಡೆದು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. 

ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ಯುವುದನ್ನು ಗಮನಿಸಿದ್ದ ಸ್ನೇಹಿತೆ ಮನೆಗೆ ಧಾವಿಸಿ ಮಾಹಿತಿ ನೀಡಿದ್ದಾರೆ.    ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಮನಗಂಡು ತಾಯಿ ದೂರು ದಾಖಲಿಸಿದ್ದರು. ಆರೋಪಿ  ಯಾರಿಗೂ ವಿಚಾರ ತಿಳಿಸದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ. ಪ್ರಕರಣ ದಾಖಲಾದ  ಬಳಿಕ ಆಗಸ್ಟ್ 15 ರಂದು ಆರೋಪಿಯನ್ನು ಬಂಧಿಸಲಾಗಿತು. ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣವನ್ನು ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸೆಷನ್ಸ್  ಎಫ್‌ಟಿಎಸ್‌ಸಿ-II (ಪೊಕ್ಸೊ) ನ್ಯಾಯಾಲಯ ವಿಚಾರಣೆ ನಡೆಸಿದೆ. ವಾದ - ವಿವಾದವನ್ನು ಆಲಿಸಿದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥತನೆಂದು ಘೋಷಿಸಿ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ  ಹಾಗೂ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಕ್ರಿಮಿನಲ್‌ ಬೆದರಿಕೆಗಾಗಿ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ತಿಂಗಳು ಶಿಕ್ಷೆ ಕೂಡ ವಿಧಿಸಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಸರಕಾರದ ಪರವಾಗಿ ವಾದಿಸಿದ್ದರು.