ಮಾರ್ಗಶಿರ ಮಾಸ ಆರಂಭ..!!ಈ ಮಾಸದಲ್ಲಿ ಬೆಳಗ್ಗೆ ಎದ್ದು ಪೂಜೆ ಮಾಡುವುದರಿಂದ ಶುಭ ಫಲ ಸಿಗುತ್ತದೆ!


ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಪ್ರತಿ ತಿಂಗಳು ಯಾವುದಾದರೊಂದು ದೇವತೆಗೆ ಸಮರ್ಪಿತವಾಗಿದ್ದು, ಆ ಮಾಸದಲ್ಲಿ ಆ ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ವಿಶೇಷ ಫಲಗಳು ಲಭಿಸುತ್ತದೆ.



ಪವಿತ್ರ ನದಿಯಲ್ಲಿ ಸ್ನಾನ

ಸ್ಕಂದ ಪುರಾಣದ ಪ್ರಕಾರ, ಶ್ರೀ ಕೃಷ್ಣನು ಮಾರ್ಗಶೀರ ಮಾಸವನ್ನು ತನ್ನ ನೆಚ್ಚಿನ ತಿಂಗಳು ಎಂದು ವಿವರಿಸಿದ್ದಾನೆ. ಈ ಸಮಯದಲ್ಲಿ ಮುಂಜಾನೆ ಎದ್ದು ಪೂಜೆ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಈ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡುವ ಮಹತ್ವವನ್ನು ಸಾರಲಾಗಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಸ್ನಾನದ ನೀರಿಗೆ ಗಂಗಾಜಲ ಸೇರಿಸಿ ಸ್ನಾನ ಮಾಡಬಹುದು.

ಒಂದು ಹೊತ್ತು ಉಪವಾಸ

ಮಹಾಭಾರತದ ಅಧ್ಯಾಯದಲ್ಲಿ ಮಾರ್ಗಶೀರ ಮಾಸದಲ್ಲಿ ಒಬ್ಬ ವ್ಯಕ್ತಿಯು ಒಂದು ಹೊತ್ತು ಉಪವಾಸ ಮಾಡುವಂತೆ ಹೇಳಲಾಗಿದೆ. ಈ ದಿನದಂದು ಬ್ರಾಹ್ಮಣರಿಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ದಾನ ನೀಡಬೇಕು. ಈ ಎಲ್ಲಾ ವಿಷಯಗಳನ್ನು ಅನುಸರಿಸುವುದರಿಂದ ಎಲ್ಲಾ ರೋಗಗಳು ಮತ್ತು ಪಾಪಗಳಿಂದ ಮುಕ್ತಿ ಸಿಗುತ್ತದಂತೆ. ಈ ಮಾಸದಲ್ಲಿ ಉಪವಾಸ ಆಚರಿಸುವುದರಿಂದ ವ್ಯಕ್ತಿಯು ಆರೋಗ್ಯವಂತ ಮತ್ತು ಸದೃಢನಾಗುತ್ತಾನೆ ಎಂದು ಹೇಳಲಾಗುತ್ತದೆ. 

ಬೆಳ್ಳಿ ಮತ್ತು ಆಹಾರ ದಾನ

ಮಾರ್ಗಶೀರ ಮಾಸದಲ್ಲಿ ಬೆಳ್ಳಿ ಮತ್ತು ಆಹಾರವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ರೀತಿ ಈ ಮಾಸದಲ್ಲಿ ಅನ್ನದಾನ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ದುಃಖಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.