ಮಂಗಳೂರು: ಮಹಿಳೆಯರ ಸರ ಎಳೆದೊಯ್ಯುತ್ತಿದ್ದ ಮೂವರು ಸರಗಳ್ಳರು ಅರೆಸ್ಟ್

ಮಂಗಳೂರು: ಮಹಿಳೆಯರ ಸರವನ್ನು ಎಳೆದೊಯ್ದು ಸುಲಿಗೆ ಮಾಡುತ್ತಿದ್ದ ಮೂವರು ಸರಗಳ್ಳರನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 90 ಗ್ರಾಂ ತೂಕದ  ಚಿನ್ನಾಭರಣಗಳ ಸಹಿತ 2 ಸ್ಕೂಟರ್, 3 ಮೊಬೈಲ್  ಪೋನ್ ಗಳು ಸೇರಿದಂತೆ ಒಟ್ಟು 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಕುಲಶೇಖರ, ಶಕ್ತಿನಗರ ರಸ್ತೆ, ಕಲ್ಪನೆ ನಿವಾಸಿ  ಜಗದೀಶ್ ಶೆಟ್ಟಿ(39), ಉರ್ವಸ್ಟೋರ್ ನಿವಾಸಿ‌ ಸುಜಿತ್ ಶೆಟ್ಟಿ ಪ್ರಾಯ(40), ಕೊಂಚಾಡಿ, ಪದವಿನಂಗಡಿ ನಿವಾಸಿ ಸುರೇಶ್ ರೈ(39) ಬಂಧಿತ ಆರೋಪಿಗಳು. 

2022ರ ಆಗಸ್ಟ್ ನಲ್ಲಿ ಮಂಗಳೂರಿನ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಪ್ರಕರಣ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಒಂದು ಸರ ಸುಲಿಗೆ ಪ್ರಕರಣ ದಾಖಲಾಗಿತ್ತು.‌ ಮಹಿಳೆಯರ ಸರವನ್ನು ಎಳೆದೊಯ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ  ಸಿಸಿಬಿ ಅಧಿಕಾರಿ, ಸಿಬ್ಬಂದಿಯವರು ಪತ್ತೆ ಕಾರ್ಯ ನಡೆಸಿದ್ದಾರೆ.  

ಮಹಿಳೆಯರ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ  ಮೂವರು ಆರೋಪಿಗಳನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಿರುವ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಜಗದೀಶ್ ನು ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ.  ಸುಜಿತ್ ಶೆಟ್ಟಿ ಎಂಬಾತನು  ಮಂಗಳೂರಿನಲ್ಲಿ 2002 ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದನು.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu