-->

ಮೂಡುಬಿದಿರೆ: ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಬರೋಬ್ಬರಿ 2,700 ಕಿ.ಮೀ. ದೂರ ಕ್ರಮಿಸಿ ಆಸ್ಪತ್ರೆಗೆ ದಾಖಲು..!

ಮೂಡುಬಿದಿರೆ: ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಬರೋಬ್ಬರಿ 2,700 ಕಿ.ಮೀ. ದೂರ ಕ್ರಮಿಸಿ ಆಸ್ಪತ್ರೆಗೆ ದಾಖಲು..!

ಮಂಗಳೂರು: ಮಾಮೂಲಿ‌ 100-200 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ರೋಗಿಯನ್ನು ರವಾನಿಸುವುದನ್ನು ನಾವು ಎಲ್ಲಾ ಕಡೆಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಒಂದು ಆಸ್ಪತ್ರೆಯಿಂದ  ಮತ್ತೊಂದು ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರಿಸುವುದಕ್ಕೆ ಆ್ಯಂಬುಲೆನ್ಸ್ ಒಂದು ಬರೋಬ್ಬರಿ 2,700 ಕಿ.ಮೀ. ದೂರ ಕ್ರಮಿಸಿರುವ ಪ್ರಸಂಗವೊಂದು ನಡೆದಿದೆ.

ಹೌದು... ಮೂಡಬಿದಿರೆಯಿಂದ ಉತ್ತರ ಪ್ರದೇಶದ ಮೊರದಾಬಾದ್​ಗೆ ಸುಮಾರು 2700 ಕಿ ಮೀ ದೂರಕ್ಕೆ ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರ ಮಾಡಲಾಗಿದೆ. ಮಹಾಂದಿ ಹಸ್ಸನ್ ಎಂಬ ವ್ಯಕ್ತಿ ಮೂಡಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ಬಿದ್ದು ಗಂಭೀರವಾಗಿ ಗಾಯಗೊಂಡು ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಉತ್ತರ ಪ್ರದೇಶದ ಮೊರದಾಬಾದ್​ನವರಾಗಿದ್ದು, ಇವರ ಕುಟುಂಬ ಮೊರದಾಬಾದ್​ನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಆಸ್ಪತ್ರೆ ವೈದ್ಯರ ಒಪ್ಪಿಗೆ ಪಡೆದು ಮೊರದಾಬಾದ್​ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಅದರಂತೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಹೋಗಲು ನಿರ್ಧರಿಸಲಾಗಿತ್ತು. ಮಹಾಂದಿ ಹಸನ್ ಅವರ ತಂದೆ ಮೂಡಬಿದಿರೆಯ ಐರಾವತ ಆಂಬ್ಯುಲೆನ್ಸ್ ಮಾಲಕ ಅನಿಲ್ ರೂಬನ್ ಮೆಂಡೋನ್ಸಾ ಅವರನ್ನು ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸುವಂತೆ ಕೋರಿಕೊಂಡಿದ್ದರು.

ಆ್ಯಂಬುಲೆನ್ಸ್ ನ ಚಾಲಕ ಅಶ್ವತ್ಥ್ ಸೆ.9ರಂದು ರೋಗಿ ಮಹಾದಿ ಹಸ್ಸನ್ ರನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದಿದ್ದಾರೆ. ಆದರೆ ಈ ವೇಳೆ ವಿಮಾನಯಾನ ಸಂಸ್ಥೆಯು ವೈದ್ಯರು ಮತ್ತು ದಾದಿಯರಿಲ್ಲದೆ ವಿಮಾನದಲ್ಲಿ ರೋಗಿಯನ್ನು ರವಾನೆ ಮಾಡಲು ನಿರಾಕರಿಸಿದೆ. ಬೇರೆ ದಾರಿಕಾಣದೆ ರೋಗಿಯನ್ನು ಮೂಡಬಿದಿರೆಯ ಆಸ್ಪತ್ರೆಗೆ ಮತ್ತೆ ದಾಖಲಿಸಲಾಯಿತು. ಆದರೆ ರೋಗಿ ಮೆಹಂದಿ ಹಸನ್ ತಂದೆ ಬಬ್ಬು ಆಂಬ್ಯುಲೆನ್ಸ್ ಮಾಲಕ ಅನಿಲ್ ರೂಬನ್ ಮೆಂಡೋನ್ಸಾರೊಂದಿಗೆ ತಮ್ಮ ಪುತ್ರನನ್ನು ಆಂಬ್ಯುಲೆನ್ಸ್​ನಲ್ಲಿ ಮೊರದಾಬಾದ್​ಗೆ ತಲುಪಿಸಲು ಕೋರಿದ್ದಾರೆ. ಇದಕ್ಕೆ ಒಪ್ಪಿದ ಆಂಬ್ಯುಲೆನ್ಸ್ ಮಾಲಕ ಅನಿಲ್ ರೂಬನ್ ಮೆಂಡೋನ್ಸಾ ಪೊಲೀಸರಿಗೆ ಮಾಹಿತಿ ನೀಡಿ, ಮೂಡಬಿದಿರೆಯಿಂದ ಮೊರದಾಬಾದ್​ಗೆ ರೋಗಿಯ ರವಾನಿಸಲು ಒಪ್ಪಿದ್ದಾರೆ.

ಆ್ಯಂಬುಲೆನ್ಸ್ ನ ಚಾಲಕ ಅಶ್ವತ್ಥ್​ ಅವರೊಂದಿಗೆ ಅನಿಲ್ ರೂಬನ್ ಮೆಂಡೋನ್ಸಾ ಕುಳಿತು ರೋಗಿ ಮಹಾಂದಿ ಹಸ್ಸನ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗಿದೆ. ಈ ಸಂದರ್ಭ ಮಹಾಂದಿ ಹಸನ್ ಅವರ ತಂದೆ ಮತ್ತು ಸ್ನೇಹಿತರು ಜೊತೆಗಿದ್ದರು. ಸೆ.10ರಂದು ಮೂಡಬಿದಿರೆಯಿಂದ ಹೊರಟ ಆ್ಯಂಬುಲೆನ್ಸ್ ಸೆ. 12ರಂದು ಬೆಳಗ್ಗೆ ಮೊರದಾಬಾದ್ ತಲುಪಿದೆ. 

ಸುಮಾರು 2700 ಕಿ. ಮೀ. ದೂರಕ್ಕೆ ಹೋಗುವ ವೇಳೆ ಡೀಸೆಲ್ ಹಾಕೋದಕ್ಕೆ ಆ್ಯಂಬುಲೆನ್ಸ್ ನಿಲ್ಲಿಸಿದ್ದು ಬಿಟ್ಟರೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ಚಲಿಸಿ ಗುರಿ‌ಮುಟ್ಟಿದ್ದಾರೆ. ಚಾಲಕ ಸೇರಿದಂತೆ ಯಾರು ಊಟ, ತಿಂಡಿಗೂ ವಾಹನವನ್ನು ನಿಲ್ಲಿಸಿಲ್ಲ. ರೋಗಿಗೆ ಮೂರು ಗಂಟೆಗೊಮ್ಮೆ ದ್ರವ ಆಹಾರ ನೀಡಬೇಕಿದ್ದು, ಈ ಸಂದರ್ಭದಲ್ಲಿ ವಾಹನ ಚಾಲಕ ಸನಿಹದಲ್ಲಿ ಸಿಗುವ ಜ್ಯೂಸ್ ಕುಡಿದು ವಾಹನ ಚಾಲನೆಗೆ ಸಜ್ಜಾಗುತ್ತಿದ್ದರು. ನಾವು ಮೊರದಾಬಾದ್ ತಲುಪಿದಾಗ ನೀವು ವೈದ್ಯರಿಲ್ಲದೆ ಇಷ್ಟು ದೂರ ಹೇಗೆ? ಬಂದಿರಿ ಎಂದು ಅಲ್ಲಿನ ವೈದ್ಯರು ಆಶ್ಚರ್ಯ ಚಕಿತರಾದರು. ಈ ರೋಗಿ ಕುಟುಂಬ ಸಂಪರ್ಕದಲ್ಲಿದ್ದು, ಇದೀಗ ಆತನಿಗೆ ಪ್ರಜ್ಞೆ ಬಂದು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ. 

Ads on article

Advertise in articles 1

advertising articles 2

Advertise under the article