ಪರೀಕ್ಷೆಯಲ್ಲಿ ಪಾಸ್ ಆಗಿರುವುದಕ್ಕೆ ಮದ್ಯ ಕೊಡಿಸುವಂತೆ ಪೀಡಿಸುತ್ತಿದ್ದ ನೆರೆಮನೆಯ ಯುವಕನನ್ನು ಮದ್ಯ ಕೊಡಿಸಿ ಹತ್ಯೆ

ಶಿವಮೊಗ್ಗ: ಪರೀಕ್ಷೆಯಲ್ಲಿ ಪಾಸ್ ಆಗಿರುವುದಕ್ಕೆ ಪಾರ್ಟಿ ಕೊಡುವಂತೆ ಪೀಡಿಸುತ್ತಿದ್ದ ನೆರೆಮನೆಯಾತನನ್ನು ಪಾರ್ಟಿಗೆ ಕರೆದೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹೊಸಮನೆ ಮೂರನೇ ಕ್ರಾಸ್‌ನ ಕಿರಣ್ ಅಲಿಯಾಸ್ ಪುಚ್ಚಿ (23) ಹತ್ಯೆಯಾದ ಯುವಕ. ಹೊಸಮನೆಯ ಪ್ರಜ್ವಲ್ ಹಾಗೂ ಗಾಡಿಕೊಪ್ಪದ ಕಾರ್ತಿಕ್ ಕೊಲೆಗೈದಿರುವ ಆರೋಪಿಗಳು. 

ವಿನೋಬ ನಗರ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ಕೊಲೆಯಾದ ಕಿರಣ್ ಹಾಗೂ ಪ್ರಜ್ವಲ್ ಹೊಸಮನೆ 3ನೇ ಕ್ರಾಸ್‌ನಲ್ಲಿ ನೆರೆಮನೆಯವರು. ಪ್ರಜ್ವಲ್ ಎಕ್ಸಾಂನಲ್ಲಿ ಉತ್ತೀರ್ಣನಾಗಿದ್ದ. ಆದ್ದರಿಂದ ಪಾರ್ಟಿ ಕೊಡುವಂತೆ ಕಿರಣ್ ಪೀಡಿಸುತ್ತಿದ್ದ. ಈತನ ಪೀಡನೆ ಸಹಿಸದೆ ಮಂಗಳವಾರ ರಾತ್ರಿ ಕಿರಣ್ , ಪ್ರಜ್ವಲ್ ಮತ್ತು ಕಾರ್ತಿಕ್ ಮೂವರು ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. 

ಈ ವೇಳೆ ಕಿರಣ್ 2 ಸಾವಿರ ರೂ. ಕೊಡುವಂತೆ ಪ್ರಜ್ವಲ್‌ನನ್ನು ಕೇಳಿದ್ದಾನೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಪ್ರಜ್ವಲ್ ಮತ್ತು ಕಾರ್ತಿಕ್ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪ್ರಜ್ವಲ್ ಮತ್ತು ಕಾರ್ತಿಕ್, ಮದ್ಯದ ಬಾಟಲಿಯಿಂದಲೇ ಕಿರಣ್‌ ತಲೆಗೆ ಹೊಡೆದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಕಿರಣ್ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು. 

ತೀವ್ರ ರಕ್ತಸ್ರಾವದಿಂದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬುಧವಾರ ಬೆಳಗ್ಗೆ ದಾರಿಹೋಕರು ಕೊಲೆ ನಡೆದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಪ್ರಜ್ವಲ್ ಮತ್ತು ಕಾರ್ತಿಕ್‌ನನ್ನು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu