ಉಳ್ಳಾಲ: ಮಾರಕಾಯುಧ ದಾಳಿ ವದಂತಿ ಹಬ್ಬಿಸಿದವನ ವಿರುದ್ಧ ಕ್ರಮ; ಪೊಲೀಸ್ ಕಮಿಷನರ್

ಉಳ್ಳಾಲ: ತನ್ನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಲು ಯತ್ನಿಸಲಾಗಿದೆ ಎಂದು ವದಂತಿ ಹಬ್ಬಿಸಿರುವ  ವ್ಯಕ್ತಿಯ ವಿರುದ್ಧವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಉಚ್ಚಿಲ ಜಾಲುಹಿತ್ತಿಲು ನಿವಾಸಿ ಕಿಶೋರ್(45) ವದಂತಿ ಹಬ್ಬಿಸಿದಾತ. 


ಕಿಶೋರ್ ಕೂಲಿ ಕೆಲಸ ಮಾಡುವವರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ಯಾರೋ ತನ್ನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನಿಸಿದ್ದಾರೆ ಎಂದು ಅವರು ವದಂತಿ ಹಬ್ಬಿಸಿದ್ದರು. ಈ ಬಗ್ಗೆ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಅಂತಹ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿದು ಬಂದಿದೆ. 


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ , 'ಆ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನದಂತಹ ಯಾವುದೇ  ಘಟನೆ ನಡೆದಿಲ್ಲ. ಮಾಹಿತಿ ತಿಳಿದ ತಕ್ಷಣ ತಾನು ಸ್ಥಳಕ್ಕೆ ಭೇಟಿ ನೀಡಿ ವದಂತಿ ಹಬ್ಬಿಸಿರುವ ವ್ಯಕ್ತಿಯನ್ನು ವಿಚಾರಿಸಿದ್ದೇನೆ. ಆತ ತನ್ನ ಮೇಲೆ ದಾಳಿ ಆಗುತ್ತದೆ ಎಂದು ಅನ್ನಿಸಿತ್ತು. ಯಾರೂ ತನ್ನ ಮೇಲೆ ತಲವಾರು ದಾಳಿ ನಡೆಸಿಲ್ಲ, ಯಾರೂ ಬೆನ್ನಟ್ಟಿ ಬಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ವದಂತಿ ಹಬ್ಬಿಸಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಕೊಡದಿರಿ. ಮಾಧ್ಯಮವೂ ಈ ಬಗ್ಗೆ ಪೊಲೀಸ್ ಮಾಹಿತಿ ಪಡೆದೇ ಸುದ್ದಿ ಮಾಡಬೇಕೆಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮನವಿ ಮಾಡಿದ್ದಾರೆ.



BREAKING NEWS
Loading latest news...
Join our WhatsApp Channel Powered By : Online Pudu