
ಬೆಳ್ತಂಗಡಿ: ಹಾಡಹಗಲೇ ವೃದ್ಧೆಯ ಕೊಲೆಗೈದು ನಗ-ನಗದು ದೋಚಿದ ದುಷ್ಕರ್ಮಿಗಳು!
7/23/2022 08:54:00 AM
ಬೆಳ್ತಂಗಡಿ: ಹಾಡಹಗಲೇ ವೃದ್ಧೆಯೋರ್ವರನ್ನು ಕೊಲೆಗೈದಿರುವ ದುಷ್ಕರ್ಮಿಗಳು ಆಕೆಯ ಕಿವಿಯೋಲೆ ಸಹಿತ ಮನೆಯಲ್ಲಿದ್ದ ನಗದು ದೋಚಿರುವ ಆತಂಕಕಾರಿ ಘಟನೆ ಶನಿವಾರ ಮಧ್ಯಾಹ್ನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (85) ಮೃತಪಟ್ಟ ದುರ್ದೈವಿ.
ಅಕ್ಕು ಅವರ ಪುತ್ರ ಮತ್ತು ಸೊಸೆ ಕೆಲಸಕ್ಕೆ ಹೋಗಿದ್ದು, ಮೊಮ್ಮಗಳು ಶಾಲೆಗೆ ಹೋಗಿದ್ದಳು. ಆದರೆ ಮಧ್ಯಾಹ್ನ ವೇಳೆ ಶಾಲೆಯಿಂದ ಮನೆಗೆ ಬಂದಿರುವ ಮೊಮ್ಮಗಳು ಅಜ್ಜಿ ಮನೆಯಲ್ಲಿ ಇರಲಿಲ್ಲ. ಬಳಿಕ ಆಕೆ ಹುಡುಕಾಡಿದಾಗ ಅಕ್ಕು ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿದ್ದರು.
ತಕ್ಷಣ ಆಕೆ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಅಕ್ಕು ಮೃತಪಟ್ಟಿದ್ದಾರೆ. ಅವರ ಕಿವಿಯಲ್ಲಿದ್ದ ಒಡವೆಯನ್ನು ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅಕ್ಕುವನ್ನು ಕೊಲೆಗೈದು ಚಿನ್ನಾಭರಣ ದರೋಡೆಗೈದಿದ್ದಾರೆಂದು ಪೊಲೀಸ್ ದೂರಿನಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.