ಮಂಗಳೂರು: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಬೆಕ್ಕು; ಮತ್ತೆ ಸಾಹಸ ಮೆರೆದ ರಜನಿ‌ ಶೆಟ್ಟಿ

ಮಂಗಳೂರು: ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ಪಾಲಿಗೆ ತಾಯಿಯಾಗಿರುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿಯವರು ಪದೇ ಪದೇ ಸುದ್ದಿಯಾಗುವುದು ಸಾಹಸ ಮೆರೆದು ಪ್ರಾಣಿ - ಪಕ್ಷಿಗಳ ರಕ್ಷಣೆಯ ಮೂಲಕವೇ‌. ಇದೀಗ ಅವರು ಮತ್ತೊಮ್ಮೆ ಹರಸಾಹಸಪಟ್ಟು ಪರ್ಶಿಯನ್ ಬೆಕ್ಕೊಂದನ್ನು ರಕ್ಷಿಸಿ ಸುದ್ದಿಯಾಗಿದ್ದಾರೆ. 

ಹೌದು... ನಗರದ ಕೊಡಿಯಾಲಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟೊಂದರಲ್ಲಿ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕಾನಿಗೆ ಬಿದ್ದು ಹೊರಬರಲಾಗದೆ ಸಿಲುಕಿಕೊಂಡಿತ್ತು. ಈ ಅಪಾರ್ಟ್‌ಮೆಂಟ್‌ ವಾಸಿಯಾಗಿರುವ ಕುಟುಂಬ ಪರ್ಶಿಯನ್ ತಳಿಯ ಬೆಕ್ಕೊಂದನ್ನು ಸಾಕಿದ್ದರು. ಆದರೆ ಮನೆಯವರು ನಿತ್ಯವೂ ಮನೆ ಬಾಗಿಲು ಹಾಕಿ ಕೆಲಸಕ್ಕೆ ಹೋಗುವಂತೆ ಶನಿವಾರವೂ ಹೋಗಿದ್ದಾರೆ‌. ಆದರೆ ಅದೇನಾಯ್ತೋ ಬೆಕ್ಕು ಹೊರ ಬಂದು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಸಿಕ್ಕಿಹಾಕಿಕೊಂಡಿತ್ತು.


ರಾತ್ರಿ ಮನೆಯವರು ಬಂದಾಗಲೇ ಬೆಕ್ಕು ಮಿಸ್ಸಿಂಗ್ ಆಗಿರೋದು ಅವರಿಗೆ ತಿಳಿದಿದೆ. ಆದ್ದರಿಂದ ಹುಡುಕಾಡಿದಾಗ ಬೆಕ್ಕು ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಮನೆಯವರು ರಜನಿ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ಮರುದಿನ ಬೆಳಗ್ಗೆ ಅವರು ಅಲ್ಲಿಗೆ ಹೋಗಿದ್ದಾರೆ. ಆದರೆ ಬಾಲ್ಕನಿಯಲ್ಲಿ ಸಿಲುಕಿಕೊಂಡ ಬೆಕ್ಕನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ರಜನಿ ಶೆಟ್ಟಿಯವರು ಸೊಂಟಕ್ಕೆ ಹಗ್ಗ ಕಟ್ಟಿ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಗ್ಯಾಲರಿಗೆ
ಇಳಿದು ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ. ರಜನಿ ಶೆಟ್ಟಿಯವರು ಈ ಹಿಂದೆಯೂ ಬಾವಿಗೆ ಬಿದ್ದಿರುವ, ತೊಂದರೆಗೆ ಸಿಲುಕಿರುವ ನಾಯಿ , ಬೆಕ್ಕು ಸೇರಿದಂತೆ ಇನ್ನಿತರ ಮೂಕ ಪ್ರಾಣಿಗಳನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.





BREAKING NEWS
Loading latest news...
Join our WhatsApp Channel Powered By : Online Pudu