ಮಂಗಳೂರು ವಿವಿ ಕಾಲೇಜು ತರಗತಿಯಲ್ಲಿ ಸಾವರ್ಕರ್ ಫೋಟೋ ಹಾಕಿರುವ ವಿವಾದದ ಹಿನ್ನೆಲೆ ಹಲ್ಲೆ ಪ್ರಕರಣ: ಕಾಲೇಜಿಗೆ ಮುತ್ತಿಗೆ

ಮಂಗಳೂರು: ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಮಧ್ಯೆಯೇ ತರಗತಿಯಲ್ಲಿ ಸಾವರ್ಕರ್ ಫೋಟೋ ಹಾಕಿರುವ ವಿವಾದವೊಂದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇಂದು ಮಧ್ಯಾಹ್ನ ನಡೆದ ಈ  ಘರ್ಷಣೆಯಲ್ಲಿ ಎರಡೂ ತಂಡಗಳ ನಡುವೆ ಕೈ - ಕೈ ಮಿಲಾಯಿಸುವಿಕೆ ನಡೆದು ವಿದ್ಯಾರ್ಥಿಗಳು  ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ವಿದ್ಯಾರ್ಥಿ ಘಟಕ ಏಕಾಏಕಿಯಾಗಿ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.

ಕಾಲೇಜು ಗೇಟ್ ಬಾಗಿಲ ಬಳಿ ಬಂದ ಪ್ರತಿಭಟನಾ ನಿರತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ‌‌. ಪರಿಣಾಮ ಪ್ರತಿಭಟನಾಕಾರರು ಅಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎಬಿವಿಪಿ ಹಾಗೂ ಕಾಲೇಜು ಪ್ರಾಂಶುಪಾಲೆ ವಿರುದ್ಧ ಘೋಷಣೆ ಕೂಗಲಾಯಿತು.

ಮಂಗಳೂರು ವಿವಿ ಕಾಲೇಜಿನಲ್ಲಿ 3-4 ದಿನಗಳ ಹಿಂದೆ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ಸಾವರ್ಕರ್ ಫೋಟೊವನ್ನು ಹಾಕಿದ್ದಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ತಂಡವೊಂದು ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಿದೆ. ಆದರೆ ಈ ಬಗ್ಗೆ ಅವರು ಕ್ರಮ ಕೈಗೊಳ್ಳುವ ಬದಲು 'ದೇಶದ್ರೋಹಿ' ಸಾವರ್ಕರ್ ಎಂಬ ಪದವನ್ನು ಉಲ್ಲೇಖಿಸಿರುವ ಬಗ್ಗೆ ಮನವಿ ನೀಡಿರುವ ವಿದ್ಯಾರ್ಥಿಗಳ ಮೇಲೆಯೇ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ ಇಂದು ಮೂವರು ವಿದ್ಯಾರ್ಥಿಗಳ ಮೇಲೆ 40 ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗಿದೆ.

ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳದ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು. ಒಂದು ವಾರದೊಳಗೆ ಘರ್ಷಣೆಗೆ ಕಾರಣರಾದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
BREAKING NEWS
Loading latest news...
Join our WhatsApp Channel Powered By : Online Pudu