ಪತ್ನಿ ಸ್ನೇಹಿತೆಯೊಂದಿಗೆ ಅಕ್ರಮ ಸಂಬಂಧ!: ಬೇರೊಬ್ಬನೊಂದಿಗೆ ಓಡಾಡುತ್ತಿದ್ದಾಳೆಂದು ಶಂಕಿಸಿ ಮಾಡಿದ್ದೇನು ಗೊತ್ತೇ?

ಬೆಂಗಳೂರು:‌ ಪತ್ನಿಯ ಗೆಳತಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ವ್ಯಕ್ತಿಯೋರ್ವನು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ, ಲಾಡ್ಜ್​ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆಯೊಂದು ಯಶವಂತಪುರ‌‌‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಒಡಿಶಾ‌‌ ಮೂಲದ‌ ದೀಪಾ‌ ಬದನ್ ಕೊಲೆಯಾದ ಯುವತಿ.‌ ಹತ್ಯೆ ಆರೋಪಿ ಅನ್ಮಲ್ ರತನ್ ಕಂದರ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಯಶವಂತಪುರದ ರೈಲ್ವೆ ಠಾಣೆಯ ಬಳಿಯ ಬೆಂಗಳೂರು ರೆಸಿಡೆನ್ಸಿ ಲಾಡ್ಜ್​ನಲ್ಲಿ‌ ಜೂನ್ 9ರಂದು ಯುವತಿ ಕೊಲೆಯಾಗಿದ್ದಾಳೆ. ಮಾರನೇ ದಿನ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ‌. 



ಆರೋಪಿ ಅನ್ಮಲ್‌ ಕಳೆದ 2 ವರ್ಷಗಳ ಹಿಂದೆ‌‌ ದೀಪಾ‌ ಬದನ್ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆ ಬಳಿಕ ಬೆಂಗಳೂರಿನ ಜೀವನ್‌ ಭೀಮಾನಗರದಲ್ಲಿ ದಂಪತಿ‌ಯು ವಾಸವಾಗಿದ್ದರು. ಕೊಲೆಯಾದ ದೀಪಾ ಹಾಗೂ ಆರೋಪಿಯ ಪತ್ನಿ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳಾಗಿದ್ದರು. ಇದೇ ಪರಿಚಯದ ಮೇಲೆ ದೀಪಾ‌ ಬದನ್ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿತ್ತಿದ್ದಳು.

ಕಾಲೇಜು ಸ್ನೇಹಿತೆಯ ಮನೆಗೆ ದೀಪಾ ಆಗಾಗ ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿ ಅನ್ಮಲ್ ಹಾಗೂ‌ ದೀಪಾ ಇಬ್ಬರೂ ಪರಸಗಪರ ಪರಿಚಿತರಾಗಿದ್ದರು. ಈ ಒಡನಾಟವು ಇಬ್ಬರ ನಡುವೆ ಸಲುಗೆ ಬೆಳೆಯಲು ಕಾರಣವಾಗಿದೆ. ಅಲ್ಲದೆ, ಅವಬ್ಬರೂ ದೈಹಿಕ‌ ಸಂಬಂಧವನ್ನೂ ಹೊಂದಿದ್ದರು ಎನ್ನಲಾಗುತ್ತಿದೆ. ಆದರೆ, ಇತ್ತೀಚೆಗೆ ದೀಪಾ ತನ್ನ ಫೋನ್​ಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಯು ಅಸಮಾಧಾನಗೊಂಡಿದ್ದ‌‌‌.‌‌‌‌ ಆದ್ದರಿಂದ ಜೂನ್ 9ರಂದು ಆಕೆಗೆ ಕರೆ ಮಾಡಿದ ಅನ್ಮಲ್ ಲಾಡ್ಜ್ ಗೆ ಕರೆಯಿಸಿಕೊಂಡಿದ್ದಾನೆ.‌‌ ‌

ಈ ವೇಳೆ ಬೇರೊಬ್ಬನೊಂದಿಗೆ 'ನೀನು ಓಡಾಡುತ್ತಿದ್ದಿ' ಎಂದು ಕ್ಯಾತೆ ತೆಗೆದು ಜಗಳ‌ ಮಾಡಿದ್ದಾನೆ.‌ ಬಳಿಕ ತಲೆದಿಂಬಿನಿಂದ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಬಳಿಕ ರೂಮ್​ಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಮಾರನೇ ದಿನ‌ ರೂಂ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ‌ ಪೊಲೀಸರು ಬೀಗ ಮುರಿದು‌‌ ಪರಿಶೀಲಿಸಿದಾಗ ಯುವತಿ ಕೊಲೆಯಾಗಿರುವ ಸಂಗತಿ ಬಯಲಾಗಿದೆ.