ಕೋಟ: ಅಂತರ್ ಜಿಲ್ಲಾ ಬೈಕ್ ಕಳವು ಆರೋಪಿಗಳಿಬ್ಬರನ್ನು ಬಂಧಿಸಿರುವ ಕೋಟ ಪೊಲೀಸರು 9 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಅತ್ತಿಗುಡ್ಡೆ ನಿವಾಸಿ ಸೋಮಶೇಖರ್ (21), ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹೊಸಮನೆ ನಿವಾಸಿ ಶಂಕರಗೌಡ(23) ಬಂಧಿತರು.
ವಡ್ಡರ್ಸೆ ಬಳಿ ಆರೋಪಿಗಳು ಜೂ.9ರಂದು ನಂಬರ್ ಪ್ಲೇಟ್ ಇಲ್ಲದ ಬೈಕ್ ಜೊತೆ ನಿಂತಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ಅದು ಕಳವುಗೈದಿರುವ ಬೈಕ್ ಎಂದು ತಿಳಿದು ಬಂದಿದೆ. ತಕ್ಷಣ ಬೈಕ್ ಸಹಿತ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಇವರು ಈ ಹಿಂದೆಯೂ ಬೈಕ್ ಕಳವು ಗೈಯುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನ ಕಳವು ಗೈಯುತ್ತಿದ್ದಾರೆ. ಉಡುಪಿ ನಗರ ಠಾಣೆಯ 7, ಬ್ರಹ್ಮಾವರ ಠಾಣೆಯಲ್ಲಿ 1, ಶಂಕರನಾರಾಯಣ ಠಾಣೆಯಲ್ಲಿ 1, ಶೃಂಗೇರಿ ಠಾಣೆಯಲ್ಲಿ 1, ವಿಜಯನಗರ ಠಾಣೆಯಲ್ಲಿ 1, ಇಟಗಿ ಠಾಣೆಯಲ್ಲಿ 1 ಮತ್ತು ದಾವಣಗೆರೆ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 12 ಬೈಕ್ ಕಳವು ಕೃತ್ಯದಲ್ಲಿ ಈ ಆರೋಪಿಗಳು ತೊಡಗಿದ್ದಾರೆಂದು ತಿಳಿದು ಬಂದಿದೆ. ಇದೀಗ ಪೊಲೀಸರು ಇವರಿಂದ 9 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.