ಮೈಸೂರು‌: 21ರ ಅರ್ಚಕನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ; ಕಾಡು ಸೇರಿ ಪಾಡುಪಟ್ಟದ್ದು ಅಷ್ಟಿಷ್ಟಲ್ಲ!

ಮೈಸೂರು‌: ಎರಡು ಮಕ್ಕಳ ತಾಯಿಯೊಬ್ಬಳು 21ವರ್ಷದ ಅರ್ಚಕನೊಂದಿಗೆ ಪರಾರಿಯಾಗಿ ಸಂಕಷ್ಟಕ್ಕೊಳಗಾಗಿದ್ದು, ಆಕೆಯ ಪಾಡು ಹೇಳ ತೀರದು. ಬಾಳು ಕೊಡುವೆನೆಂದು ನಂಬಿಸಿ ಕರೆದೊಯ್ದ ಈ ಯುವ ಅರ್ಚಕ, 10 ದಿನಗಳ ಕಾಲ ಆಕೆಯೊಂದಿಗೆ ಸುತ್ತಾಡಿ ಕೊನೆಗೆ ಮಧ್ಯರಾತ್ರಿ ಕಾಡಲ್ಲಿ ಬಿಟ್ಟು ಹೋಗಿದ್ದಾನೆ. ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಪ್ರಿಯಕರನಿಗಾಗಿ ಕಾದು ಕಾದು ಸುಸ್ತಾದ ಮಹಿಳೆ, ಬೆಳಗ್ಗಿನ ಜಾವ ನಡೆದುಕೊಂಡು ಗ್ರಾಮದ ಹತ್ತಿರ ಬಂದು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ. 

ಇಂತಹ ವಿಚಿತ್ರ ಪ್ರಕರಣವೊಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ. ಶ್ರೀ ಮಹದೇಶ್ವರ ದೇವಸ್ಥಾನಕ್ಕೆ 35 ವರ್ಷದ ಈ ಮಹಿಳೆ ಶಾಸ್ತ್ರ ಕೇಳಲೆಂದು ಹೋಗಿದ್ದಾಳೆ. ಆಗ ಅಲ್ಲಿ ಆಕೆಗೆ 21 ವರ್ಷದ ಅರ್ಚಕ ಸಂತೋಷ್​ ಎಂಬಾತನ ಪರಿಚಯವಾಗಿದೆ. ಬಳಿಕ ಈ ಗೃಹಿಣಿ ಹಾಗೂ ಅರ್ಚಕನ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಆತ ಎಲ್ಲಿಗಾದರೂ ಹೋಗೋಣ, ತಾನು ನಿನಗೆ ಬಾಳು ಕೊಡುವೆ ಎಂದು ನಂಬಿಸಿದ್ದಾನೆ. ಈತನ ಮಾತಿಗೆ ಮರುಳಾದ ಮಹಿಳೆ, ಗಂಡ ಹಾಗೂ ಮಕ್ಕಳನ್ನು ತೊರೆದು ಜೂ.12ರಂದು ತವರು ಮನೆಯಿಂದ ನಾಪತ್ತೆಯಾಗಿದ್ದಾಳೆ.

ಅತ್ತ ಮಹಿಳೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರೆ, ಈಕೆ ಪ್ರಿಯಕರನೊಂದಿಗೆ ಊರು ಬಿಟ್ಟಿದ್ದಳು. ಮದುವೆಯಾಗುವೆನೆಂದು ನಂಬಿಸಿ ಆಕೆಯೊಂದಿಗೆ ಆತ್ಮೀಯವಾಗಿದ್ದ ಸಂತೋಷ್​, ದೇಗುಲ ಹಾಗೂ ನಿರ್ಜನ ಪ್ರದೇಶದಲ್ಲಿ ಸುತ್ತಾಡಿಸಿದ್ದಾನೆ. 10 ದಿನಗಳ ಕಾಲ ಜೊತೆಯಾಗಿ ಇದ್ದವನು, ಜೂ.22ರಂದು ವರಸೆ ಬದಲಿಸಿ ಮದುವೆ ಆಗಲು ಮನೆಯಲ್ಲಿ ಒಪ್ಪೊದಿಲ್ಲವೆಂದು ಉಲ್ಟಾ ಹೊಡೆದಿದ್ದಾನೆ. 

ಎಲ್ಲಿಗಾದರೂ ದೂರ ಹೋಗಿ ಬದುಕೋಣ ಎಂದರೂ ಆತ ಸಮ್ಮತಿಸಿಲ್ಲ. ಊರಿಗೆ ವಾಪಸ್​ ಹೋಗೋಣ, ಅಲ್ಲಿಯೇ ನನಗೆ ತಾಳಿ ಕಟ್ಟು, ನಾನು ನಿನ್ನೊಂದಿಗೇ ಬಾಳುವೆ ಎಂದು ಆಕೆ ಗೋಗರೆದರೂ ಕಿವಿಗೊಡದ ಆತ, ಅಲ್ಲಿಗೆ ಹೋದರೆ ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿದ್ದಾನೆ. ಕೊನೆಗೆ ಇಬ್ಬರೂ ಸಾವಲ್ಲಿ ಒಂದಾಗೋಣ, ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ರಾತ್ರಿ 12 ಗಂಟೆ ಸುಮಾರಿಗೆ ಇಲ್ಲೇ ಇರು ಬರ್ತೀನಿ ಒಂದೈದು ನಿಮಿಷ ಎಂದು ಹೇಳಿ ಹೋದ ಸಂತೋಷ್​ ಮತ್ತೆ ವಾಪಸ್​ ಬಂದಿಲ್ಲ. 

ಕಗ್ಗತ್ತಲ ರಾತ್ರಿ, ಒಂಟಿಯಾಗಿ ಇಡೀ ರಾತ್ರಿ ಮಹಿಳೆ ಕಾಡಿನಲ್ಲೇ ತನ್ನ ಪ್ರಿಯಕರನಿಗಾಗಿ ಕಾದಿದ್ದಾಳೆ. ಬೆಳಗಾದರೂ ಪ್ರಿಯಕರ ಬಂದಿಲ್ಲವೆಂದು ನಡೆದುಕೊಂಡೇ ಕಾಡಂಚಿಗೆ ಬಂದು ಕುಳಿತಿದ್ದ ಒಬ್ಬಂಟಿ ಮಹಿಳೆಯನ್ನು ಕಂಡ ಸ್ಥಳೀಯರು ಬಂದು ವಿಚಾರಿಸಿದ್ದಾರೆ. ಆಗ ಮಹಿಳೆಯ ತ‌ನ್ನ ಕಣ್ಣೀರ ಕಥೆಯನ್ನು ಹೇಳಿದ್ದಾಳೆ. ಇದನ್ನು ಕೇಳಿದ ಗ್ರಾಮಸ್ಥರು, ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಲ್ಲಿ ತನಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾಳೆ. ನನಗೆ ಸಂತೋಷ್​ ಬೇಕು, ಆತನ ಜತೆ ಮದ್ವೆ ಮಾಡಿಸಿ. ಅವನು ಮದ್ವೆಯಾಗುತ್ತೇನೆ ಎಂದು ಕರೆದುಕೊಂಡು ಬಂದು ಈಗ ನಾಪತ್ತೆಯಾಗಿದ್ದಾನೆ. ನನಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಮಹಿಳೆಯ ಮನವೊಲಿಸಿ ಪೊಲೀಸರು ಕರೆದೊಯ್ದಿದ್ದು, ಸಂತೋಷ್​ ಪತ್ತೆಗೆ ಬಲೆ ಬೀಸಿದ್ದಾರೆ
BREAKING NEWS
Loading latest news...
Join our WhatsApp Channel Powered By : Online Pudu