
ಮಂಗಳೂರು: ರಹೀಂ ಉಚ್ಚಿಲ್ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ದಿಢೀರ್ ಪದಚ್ಯುತಿ
4/06/2022 03:41:00 AM
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಅವರು ದಿಢೀರ್ ಪದಚ್ಯುತಿಗೊಂಡಿದ್ದಾರೆ.
ರಾಜ್ಯಪಾಲರದ ಆದೇಶದನ್ವಯ ರಾಜ್ಯ ಸರಕಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ರನ್ನು ಪದಚ್ಯುತಿಗೊಳಿಸಿ ತಕ್ಷಣದಿಂದ ಜಾರಿಗೊಳ್ಳುವಂತೆ ಆದೇಶಿಸಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಉಪಾಧ್ಯಕ್ಷರೂ ಆಗಿದ್ದ ರಹೀಂ ಉಚ್ಚಿಲ್ ರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪದಚ್ಯುತಿಗೊಳಿಸಿದೆ.
ಸರ್ಕಾರದ ಧಿಡೀರ್ ಆದೇಶದಿಂದ ಅಚ್ಚರಿಗೊಂಡಿರುವ ರಹೀಂ ಉಚ್ಚಿಲ ಅವರು, ರಾಜ್ಯ ಸರ್ಕಾರ ಪದಚ್ಯುತಿಗೊಳಿಸಿರುವ ಆದೇಶದ ಪ್ರತಿಯನ್ನು ನೋಡಿದ್ದೇನೆ. ಆದರೆ ಯಾಕಾಗಿ ಈ ಪದಚ್ಯುತಿ ಎಂಬುದು ಇನ್ನೂ ತಿಳಿದಿಲ್ಲ. ಆದೇಶ ಪತ್ರದಲ್ಲೂ ಪದಚ್ಯುತಿಗೆ ಕಾರಣ ತಿಳಿಸಿಲ್ಲ. ನಾನೂ ಈ ಪದಚ್ಯುತಿಯ ಕಾರಣದ ಹುಡುಕಾಟದಲ್ಲಿದ್ದೇನೆ. ಕಾರಣ ಹೇಳಿದರೆ ಆತ್ಮಾವಲೋಕನ ಮಾಡಬಹುದು. ಆದರೆ ಕಾರಣ ಹೇಳದೆ ಪದಮುಕ್ತಗೊಳಿಸಿದ್ದಾರೆ. ಸರ್ಕಾರ ಮತ್ತು ಪಕ್ಷದ ಆದೇಶವನ್ನು ಪಾಲನೆ ಮಾಡುತ್ತೇನೆ.ನನಗೆ ಎರಡೂವರೆ ವರ್ಷ ಅಕಾಡೆಮಿ ಅಧ್ಯಕ್ಷನಾಗಲು ಅವಕಾಶ ನೀಡಿದ್ದಾರೆ. ಅವಕಾಶ ಕೊಟ್ಟ ಸರ್ಕಾರ ಮತ್ತು ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರಹೀಂ ಉಚ್ಚಿಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.