ಥೂ...! ಇವರ ಅಸಹ್ಯ ಸಂಬಂಧಕ್ಕೆ ಬಲಿಯಾದಳು ತಾಯಿ: ಕೊನೆಗೂ ಅಣ್ಣ-ತಂಗಿ ಕಾಮ ಪುರಾಣಕ್ಕೆ ಅಡ್ಡಿಯಾಗಿದ್ದ ಕೊಲೆ ಸಂಚು ಬಯಲು

ತುಮಕೂರು: ನಗರದ ಕೊರಟಗೆರೆ ಪಟ್ಟಣದಲ್ಲಿ ಜ.30ರಂದು ನೀರಿನ ಸಂಪ್​ಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ದೊರಕಿದ್ದು, ಮಹಿಳೆಯು ಆಕಸ್ಮಿಕವಾಗಿ ಮೃತಪಟ್ಟಿರೋದಲ್ಲ, ಬದಲಾಗಿ ಆಕೆಯ ಪುತ್ರಿಯೇ ಹೆತ್ತಮ್ಮನನ್ನು ಕೊಂದಿದ್ದಾಳೆ ಎಂಬ ಭಯಾನಕ ಸತ್ಯ ಬಯಲಾಗಿದೆ. 

ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಮೃತ ದುರ್ದೈವಿ. ಶೈಲಜಾ ಹಾಗೂ ಪುನೀತ್ ಕೊಲೆಗೈದಿರುವ ಆರೋಪಿಗಳು.

ಶೈಲಜಾ ಹಾಗೂ ಪುನೀತ್ ಸಂಬಂಧದಲ್ಲಿ ಅಣ್ಣ - ತಂಗಿಯಾಗಿದ್ದರು. ಇವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಇವರ ಅಕ್ರಮ ಸಂಬಂಧಕ್ಕೆ ಶೈಲಜಾ ತಾಯಿಯೇ ಅಡ್ಡಿಯಾಗಿದ್ದರು. ಆದ್ದರಿಂದ ಶೈಲಜಾ ತಾಯಿಯನ್ನೇ ಕೊಂದು ವಿಕೃತಿ ಮೆರೆದಿದ್ದಾಳೆ. ಪೊಲೀಸ್​ ತನಿಖೆಯಲ್ಲಿ ಅಣ್ಣ-ತಂಗಿಯ ಅಕ್ರಮ ಸಂಬಂಧ ಬಯಲಾದ ಬಳಿಕ ತಾಯಿಯ ಮರಣದ ರಹಸ್ಯ ಬಯಲಾಗಿದೆ.  

ಜ.30ರಂದು ಮನೆ ಬಳಿಯ ನೀರಿನ ಸಂಪ್​ಗೆ ಕಾಲುಜಾರಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಸಾವಿತ್ರಮ್ಮ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಶೈಲಜಾ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ನಡೆ ಮೇಲೆ ಒಂದು ಕಣ್ಣಿಟ್ಟಿದ್ದ ಪೊಲೀಸರಿಗೆ ಅಸಲಿ ಸತ್ಯ ಇದೀಗ ತಿಳಿದು ಬಂದಿದೆ. 

ಶೈಲಜಾ ಹಾಗೂ ಪುನೀತ್ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು. ವರಸೆಯಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದ. ಹೊರಜಗತ್ತಿಗೆ ಇವರಿಬ್ಬರೂ ಅಣ್ಣ-ತಂಗಿಯಂತಿದ್ದರೂ,  ಮನೆಯೊಳಗೆ ಅನೈತಿಕ ಸಂಬಂಧದಲ್ಲಿ ತೊಡಗುತ್ತಿದ್ದರು. ಇವರಿಬ್ಬರ ಅಸಹ್ಯ ಸಂಬಂಧದ ತಿಳಿದ ಪುನೀತ್ ತಾಯಿ ಹಾಗೂ ಶೈಲಜಾ ತಾಯಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಣ್ಣ-ತಂಗಿ ಸಂಬಂಧ, ಬಾಂಧವ್ಯದ ಬಗ್ಗೆ ತಿಳಿಹೇಳಿ, ಇನ್ನೊಮ್ಮೆ ಇಂತಹ ಅಸಹ್ಯ ಸಂಬಂಧದ ಬಗ್ಗೆ ಯೋಚಿಸದಿರಿ, ನೀವಿಬ್ಬರೂ ಪರಸ್ಪರ ಭೇಟಿ​ಯಾಗಬೇಡಿ. ಕಾಲ್​, ಮೆಸೇಜ್​ ಎಲ್ಲವೂ ಬಂದ್​ ಆಗಲಿ ಎಂದು ಎಚ್ಚರಿಕೆ ಕೊಟ್ಟಿದ್ದರು. 

ಸ್ವಲ್ಪ ದಿನಗಳ ಕಾಲ ಈ ಅಸಹ್ಯ ಕೆಲಸವನ್ನು ಬಿಟ್ಟಂತೆ, ಅಣ್ಣ-ತಂಗಿಯಂತೆ ನಟಿಸಿರುವ ಶೈಲಜಾ ಹಾಗೂ ಪುನೀತ್​ ಇಬ್ಬರೂ ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದರು. ಜ.29ರ ರಾತ್ರಿ ಶೈಲಜಾ ಮನೆಗೆ ಪುನೀತ್ ಬಂದಿದ್ದ. ಸಾವಿತ್ರಮ್ಮ, ಶೈಲಜಾ ಹಾಗೂ ಪುನೀತ್ ಮೂವರು ಒಟ್ಟಿಗೆ ಊಟ ಮಾಡಿದ್ದರು. ಪುನೀತ್​ ಅದೇ ಮನೆಯಲ್ಲೇ ಮಲಗಿದ್ದ. ಅಂದು ಸಾವಿತ್ರಮ್ಮರ ಕೊಲೆಗೆ ಪುನೀತ್ ಮತ್ತು ಶೈಲಜಾ ಸ್ಕೆಚ್ ಹಾಕಿದ್ದರು. 

ಇಬ್ಬರೂ ಮಧ್ಯರಾತ್ರಿ ಸಾವಿತ್ರಮ್ಮರ ಕತ್ತು ಹಿಸುಕಿ ಕೊಂದು ಸಂಪ್​ಗೆ ಶವ ಎಸೆದು, ಕಾಲು ಜಾರಿ ಸಂಪ್​ಗೆ ಬಿದ್ದು ಮೃತಪಟ್ಟಿದ್ದಾರೆಂದು ಬಿಂಬಿಸಿ ನಾಟಕವಾಡಿದ್ದರು. ಸಾವಿತ್ರಮ್ಮರ ಅಂತ್ಯಕ್ರಿಯೆಯ ಬಳಿಕವೂ ತಾಯಿ ಕಳೆದುಕೊಂಡ ನೋವು ಶೈಲಜಾಗೆ ಇದ್ದಂತೆ ಕಾಣಲಿಲ್ಲ. ತಮ್ಮ ಪಾಲಿಗಿದ್ದ ಅಡ್ಡಿ ಸರಿದಿದೆ ಎಂಬ ಸಂತೋಷದಲ್ಲಿ ಪುನೀತ್ ಮತ್ತು ಶೈಲಜಾ ಇಬ್ಬರೂ ತಮ್ಮ ಪ್ರಣಯದಾಟ ಮುಂದುವರಿಸಿದ್ದರು. ಪೊಲೀಸರಿಗೆ ಅನುಮಾನ ಬಂದು ಇವರಿಬ್ಬರನ್ನೂ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu