-->

ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದತ್ತು ಕೇಂದ್ರದ ಎದುರು ತಾಯಿಯ ಧರಣಿ: ಪ್ರಕರಣಕ್ಕೆ ಟ್ವಿಸ್ಟ್ ಹೆತ್ತವರಿಗೆ ಮದುವೆ ಮಾಡಿಸಿದ ಕಂದ

ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದತ್ತು ಕೇಂದ್ರದ ಎದುರು ತಾಯಿಯ ಧರಣಿ: ಪ್ರಕರಣಕ್ಕೆ ಟ್ವಿಸ್ಟ್ ಹೆತ್ತವರಿಗೆ ಮದುವೆ ಮಾಡಿಸಿದ ಕಂದ

ತಿರುವನಂತಪುರ: ಕೇರಳ ರಾಜ್ಯದ ಅವಿವಾಹಿತೆಯಾಗಿದ್ದ ಅನುಪಮಾ ಎಂಬಾಕೆ 2020ರ ಅಕ್ಟೋಬರ್ 19ರಂದು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಜಿತ್‌ ಎಂಬುವವರ ಪ್ರೀತಿಯ ಫಲವಾಗಿ ಈ ಮಗುವಿನ ಜನನವಾಗಿತ್ತು. ಇಬ್ಬರೂ ಮದುವೆಯಾಗುವ ಆಲೋಚನೆಯಲ್ಲಿದ್ದರು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. 

ಅನುಪಮಾರಿಗೆ ಅಕ್ಕ ಇದ್ದು, ಆಕೆಯ ಮದುವೆ ಆಗುವವರೆಗೂ ತಂಗಿಯ ಮದುವೆ ಮಾಡುವುದಿಲ್ಲ ಎನ್ನುವುದು ಪಾಲಕರ ಹಠವಾಗಿತ್ತು. ಈ ನಡುವೆಯೇ ಅನುಪಮಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟುತ್ತಲೇ ಅನುಪಮಾ ಗಮನಕ್ಕೆ ಬಾರದಂತೆ ಆಕೆಯ ಹೆತ್ತವರು ಮಗುವನ್ನು ದತ್ತು ನೀಡಿದ್ದರು. ಕೇರಳದ ದತ್ತುಕೇಂದ್ರದ ಮೂಲಕವೇ ಈ ದತ್ತು ಪ್ರಕ್ರಿಯೆ ನಡೆದಿತ್ತು. 

ಆದರೆ ಆ ಬಳಿಕ ಅವರು ಮಗು ಹುಟ್ಟುತ್ತಲೇ ಅದು ಅಪಹರಣಕ್ಕೊಳಗಾಗಿತ್ತು ಎಂದು ಅನುಪಮಾರನ್ನು ಹೆತ್ತವರು ನಂಬಿಸಲು ಯತ್ನಿಸಿದ್ದರು. ಈ ಮಗುವನ್ನು ಆಂಧ್ರಪ್ರದೇಶದ ದಂಪತಿ ಪಡೆದುಕೊಂಡಿದ್ದರು. ಆದರೆ ಈ ಮಾತಿನ ಮೇಲೆ ಅನುಪಮಾ ಮತ್ತು ಅಜಿತ್‌ ಅವರಿಗೆ ನಂಬಿಕೆಯಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಮಗುವನ್ನು ದತ್ತುಕೇಂದ್ರದ ಮೂಲಕ ದತ್ತುಕೊಟ್ಟಿರುವುದು ತಿಳಿದು ಬಂದಿತ್ತು. ಇದಾಗುವ ಹೊತ್ತಿಗೆ ಕೆಲವು ತಿಂಗಳುಗಳೇ ಕಳೆದಿತ್ತು. ಇದರಿಂದ ಸುಮ್ಮನೆ ಕುಳಿತುಕೊಳ್ಳದ ಅನುಪಮಾ ದತ್ತು ಕೇಂದ್ರದ ಮುಂದೆ ಹಲವಾರು ದಿನಗಳ ಕಾಲ ಧರಣಿ ಕುಳಿತೇ ಬಿಟ್ಟರು.

ಈ ವಿಷಯ ಮಕ್ಕಳ ಕಲ್ಯಾಣ ಆಯೋಗದವರೆಗೂ ಹೋಯಿತು. ಅಲ್ಲಿ ಈ ಬಗ್ಗೆ ವಿಚಾರಣೆ ನಡೆದು ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ದತ್ತುಕೇಂದ್ರಕ್ಕೆ ಆಯೋಗ ನಿರ್ದೇಶನ ಮಾಡಿತ್ತು. ಬಳಿಕ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ತೆರಳಿ ಮಗುವನ್ನು ವಾಪಸ್‌ ತಂದಿದ್ದಾರೆ. ಆ ಬಳಿಕ ಮಗು ಇವರದ್ದೇ ಹೌದೋ ಅಲ್ಲವೋ ಎಂಬುದಕ್ಕೆ ಡಿಎನ್‌ಎ ತಪಾಸಣೆಯನ್ನೂ ನಡೆಸಲಾಯಿತು. ಮಗು ಈ ಅನುಪಮಾ - ಅಜಿತ್ ರದ್ದೇ  ಎಂದು ತಿಳಿದುಬಂದಿದ್ದರಿಂದ ಮಗುವನ್ನು ಅಮ್ಮನ ತೆಕ್ಕೆಗೆ ನೀಡಲಾಗಿದೆ. ಇವಿಷ್ಟೂ ಈ ಜೋಡಿಯ ಕಥೆ. 

ಇದೀಗ ಇದಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದೆ. ಅದೇನೆಂದರೆ ಈ ಪುತ್ರ ಹೆತ್ತವರ ಮಡಿಲು ಸೇರುತ್ತಲೇ ಅವರಿಬ್ಬರ ಮದುವೆಯನ್ನೂ ಮಾಡಿಸಿದ್ದಾನೆ. ಇಲ್ಲಿನ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ಅನುಪಮಾ - ಅಜಿತ್ ವಿವಾಹ ನೆರವೇರಿದೆ. ಅನುಪಮಾ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮಾಜಿ ಕಾರ್ಯಕರ್ತೆಯಾಗಿದ್ದು, ಅಜಿತ್ ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್‌ಐನ ಸ್ಥಳೀಯ ನಾಯಕರಾಗಿದ್ದರು. 

Ads on article

Advertise in articles 1

advertising articles 2

Advertise under the article