'ತಾನು ಬದಲಾಗಿದ್ದೇನೆಂದು' ಹೇಳಿ ಸುದ್ದಿಯಾದ ಹುಚ್ಚ ವೆಂಕಟ್: 'ಬೈದಾಡೋಲ್ಲ, ಕಿರಿಚಾಡೋಲ್ಲ, ಸಿನಿಮಾ ಮಾಡ್ತೇನೆ ಸಹಕರಿಸಿ ಪ್ಲೀಸ್...!'

ಬೆಂಗಳೂರು: ಕೊಂಚ ಕಾಲದಿಂದ ಸುದ್ದಿಯಲ್ಲಿಲ್ಲದ ಹುಚ್ಚ ವೆಂಕಟ್ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ ಯಾರಿಗೋ ಬೈದಾಡಿ ಸುದ್ದಿಯಾದದ್ದಲ್ಲ ಬದಲಾಗಿ 'ತಾನು ಬದಲಾಗಿದ್ದೇನೆಂದು' ಹೇಳಿ ಸುದ್ದಿಯಾಗಿದ್ದಾರೆ. 

ಬೆಂಗಳೂರು ನಗರದ ಪ್ರೆಸ್​​ ಕ್ಲಬ್​ಗೆ ಬಂದಿರುವ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಂಗಳವಾರ ದಿಢೀರ್​ ಎಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರುವ ನಟ ಹುಚ್ಚ ವೆಂಕಟ್, 'ಇಷ್ಟು ದಿನ ಏನು ಮಾಡುತ್ತಿದ್ದೆ, ಮುಂದೇನು ಮಾಡುತ್ತೇನೆ' ಎಂಬುದರ ಬಗ್ಗೆ ವಿವರಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಆಡಿರುವ ಮಾತುಗಳನ್ನು ಕೇಳಿ ಹುಚ್ಚ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಇಷ್ಟು ದಿನಗಳ ಕಾಲ 'ನನ್ ಮಗಂದ್ ನನ್ ಎಕಡ' ಎನ್ನುತ್ತಿದ್ದ ಫೈರಿಂಗ್ ಸ್ಟಾರ್ ಈಗ ಕೂಲ್​ ಸ್ಟಾರ್ ಆಗಿದ್ದಾರೆ ಅನ್ನಿಸಿದ್ದಂತೂ ಸುಳ್ಳಲ್ಲ. 

ಸುದ್ದಿಗೋಷ್ಠಿಯಲ್ಲಿ ಅವರು ‘ತಿಕ್ಲಾ ಹುಚ್ಚಾ ವೆಂಕಟ್’ ಸಿನಿಮಾವನ್ನು ಮಾಡುತ್ತಿದ್ದೇನೆ. ನನ್ನ ಬ್ಯಾನರ್​ನಲ್ಲೇ ಈ ಸಿನಿಮಾ ಮಾಡುತ್ತಿದ್ದೇನೆ. ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದ್ದಾರೆ.

ಅಲ್ಲದೆ 'ತಾನು ಬದಲಾವಣೆಯಾಗಿದ್ದೇನೆ, ಮಗು ಥರಹ ಇರಬೇಕು ಅಂದುಕೊಂಡಿದ್ದೇನೆ. ಎಲ್ಲರೂ ಪ್ರೀತಿಸ್ತಾರೆ ಅಲ್ಲವಾ, ಅದೇ ಕಾರಣಕ್ಕೆ ಇನ್ನು ಮುಂದೆ ಸಾಫ್ಟ್ ಆಗಿರಬೇಕು ಅಂದುಕೊಂಡಿದ್ದೇನೆ. ಹೀಗಾಗಿ ಅರಚಾಡೋದು, ಕಿರಚಾಡೋದು‌ ಮಾಡಲ್ಲ. ಕೆಲವೊಂದು ಕಿರು ಚಿತ್ರಗಳಲ್ಲಿ ಗೆಸ್ಟ್ ರೋಲ್ ಮಾಡಲು ಅವಕಾಶ ದೊರಕುತ್ತಿದೆ. ನನಗೆ ಹಣ ಮುಖ್ಯವಲ್ಲ, ಸಿನಿಮಾ ಮುಖ್ಯ. ಸಂಭಾವನೆಯನ್ನು ನಿರೀಕ್ಷಿಸದೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. 

ಮತ್ತೆ ಮುಂದುವರಿದು, 'ಲಾಕ್​ಡೌನ್​ನಲ್ಲಿ ಅಪ್ಪನನ್ನು ಕಳೆದುಕೊಂಡೆ. ನನ್ನನ್ನು ಅರ್ಥ ಮಾಡಿಕೊಳ್ಳುವವಳು ನನ್ನ ಜೀವನದಲ್ಲಿ ಬಂದಿದ್ದಾಳೆ. ಆದರೆ ಮಿಸ್ ಅಂಡರ್ ಸ್ಟ್ಯಾಂಡಿಂಗ್​ನಿಂದ ದೂರವಾದಳು. ನನ್ನ ತಂದೆಗೆ ನಾನು ಸಿನಿಮಾ ಮಾಡಬೇಕು ಎನ್ನುವುದು ಕನಸು. ತಂದೆಯ ಕನಸು ಈಡೇರಿಸ್ತೇನೆ. ಒಂದಷ್ಟು ದುಡ್ಡು ಕೊಟ್ಟು ಹೋಗಿದ್ದಾರೆ. ಅದರಲ್ಲೇ ಸಿನಿಮಾ ಮಾಡ್ತೀನಿ' ಎನ್ನುತ್ತಲೇ ಭಾವುಕರಾದ ವೆಂಕಟ್​, ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಆಶೀರ್ವಾದ ಇರಲಿ ಎಂದು ಕೋರಿದರು.
BREAKING NEWS
Loading latest news...
Join our WhatsApp Channel Powered By : Online Pudu