ಮಂಗಳೂರು; ಗಂಡನಿಗೆ ಡೈವೋರ್ಸ್ ಕೊಡು,ಮುಸ್ಲಿಂ ಹುಡುಗನ ಜೊತೆ ಮದುವೆ ಮಾಡಿಸ್ತೇನೆ ಎಂದು ನಾಲ್ವರ ಸಾವಿಗೆ ಕಾರಣವಾದ ನೂರ್ ಜಹಾನ್


ಮಂಗಳೂರು; ಮಂಗಳೂರಿನ ಮೋರ್ಗನ್ ‌ಗೇಟ್ ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೂರ್ ಜಹಾನ್ ಎಂಬಾಕೆಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.


ಡಿಸೆಂಬರ್ 8 ರಂದು ಮೋರ್ಗನ್ ಗೇಟ್ ಬಳಿ ಇರುವ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ನಾಗೇಶ್ ಎಂಬಾತ ತನ್ನ‌ಪತ್ನಿ ವಿಜಯಲಕ್ಷ್ಮಿ ಮತ್ತು ಇಬ್ಬರು ‌ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ನೇಣಿಗೆ ಶರಣಾಗಿದ್ದ. ಇದಕ್ಕೂ ಮುಂಚೆ ಪಾಂಡೇಶ್ವರ ಪೊಲೀಸ್ ಠಾಣೆಯ ಎಎಸ್ಐ ಅವರಿಗೆ ಈತ ವಾಯ್ಸ್ ಮೆಸೆಜ್ ಕಳುಹಿಸಿ ನನ್ನ ಪತ್ನಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿರುವ ನೂರ್ ಜಹಾನ್ ನಮ್ಮ ಸಾವಿಗೆ ಕಾರಣ ಎಂದು ಹೇಳಿದ್ದ.


ಈ ಹಿನ್ನೆಲೆಯಲ್ಲಿ ‌ನೂರ್ ಜಹಾನ್ ಳನ್ನು ಮಂಗಳೂರು ‌ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆಕೆಯನ್ನು ವಿಚಾರಣೆ ಮಾಡಿದ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನೂರ್ ಜಹಾನ್ 8 ವರ್ಷದಿಂದ ತನ್ನ ಗಂಡನಿಂದ ದೂರವಿದ್ದು ಮದುವೆ ಸಂಬಂಧ ಕುದುರಿಸುವ ಕಾರ್ಯ ಮಾಡುತ್ತಿದ್ದಾಳೆ. ಇದೀಗ ಸಾವಿಗೀಡಾಗಿರುವ ನಾಗೇಶ್ ಕುಟುಂಬ ಈಕೆ ಇದ್ದ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.ಇತ್ತೀಚೆಗೆ ಅಲ್ಲಿಂದ ಬಂದಿದ್ದರು. ಆದರೆ ವಿಜಯಲಕ್ಷ್ಮಿ ನೂರ್ ಜಹಾನ್ ಳೊಂದಿಗೆ ಸಂಪರ್ಕ‌ ಇಟ್ಟುಕೊಂಡಿದ್ದಳು.

ವಿಜಯಲಕ್ಷ್ಮಿ ಮತ್ತು ಪತಿ ನಾಗೇಶ್ ನಡುವೆ ವೈಮನಸ್ಯ ಇದ್ದು ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ನಡುವೆ ವಿಜಯಲಕ್ಷ್ಮಿ ಮನೆಯಿಂದ ನಾಪತ್ತೆಯಾಗಿ ನೂರ್ ಜಹಾನ್ ಮನೆಯಲ್ಲಿ ವಾಸವಿದ್ದಳು. ಈ ಸಂದರ್ಭದಲ್ಲಿ ನಾಗೇಶ್ ತನ್ನ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಬಳಿಕ ವಿಜಯಲಕ್ಷ್ಮಿ ಪತಿ ಮನೆಗೆ‌ ಬಂದಿದ್ದಳು. ಆದರೆ ಇಬ್ಬರಲ್ಲಿ ದಾಂಪತ್ಯ ಕಲಹ ಮುಂದುವರಿದಿತ್ತು.


ಈ ನಡುವೆ ನೂರ್ ಜಹಾನ್ ಳು ವಿಜಯಲಕ್ಷ್ಮಿ ಗೆ ಪತಿಗೆ ಡೈವೋರ್ಸ್ ನೀಡುವಂತೆ ಹೇಳಿದ್ದಾಳೆ.  ಆ ಬಳಿಕ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಿಕೊಡುವುದಾಗಿಯು ಹೇಳಿದ್ಧಾಳೆ. ಡೈವೋರ್ಸ್ ಪಡೆಯಲು ವ್ಯವಸ್ಥೆ ಮಾಡಿದ್ದಾಳೆ. ಇದು ತಿಳಿದು ನಾಗೇಶ್ ನೂರ್ ಜಹಾನ್ ಮನೆ ಮುಂದೆ ಹೋಗಿ ಗಲಾಟೆಯನ್ನು ಮಾಡಿದ್ದಾನೆ.

ಇದೇ ವಿಚಾರದಲ್ಲಿ ವಾಗ್ವಾದ ಉಂಟಾಗಿದ್ದು ಹೆಂಡತಿ ಮುಸ್ಲಿಂ ಧರ್ಮಕ್ಕೆ ಮತಾಂತರ ವಾಗುತ್ತಾಳೆ ಎಂಬ ಆಕ್ರೋಶ ದಿಂದ ನಾಗೇಶ್ ಹೆಂಡತಿ ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಇವರ ಸಾವಿಗೆ ಕಾರಣನಾದ ನೂರ್ ಜಹಾನ್ ಳನ್ನು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu