-->

ಸ್ನೇಹಿತನ ಪ್ಲ್ಯಾಟಿಗೆ ಬಂದಿದ್ದ ಕಿರಿಯ ಕಲಾವಿದೆಯರು ರಾತ್ರಿ ನಶೆಯಲ್ಲಿ ತೇಲಾಡಿದ್ದರು: ಬೆನ್ನಲ್ಲೇ ನಡೆಯಿತು ಭಾರೀ ದುರಂತ

ಸ್ನೇಹಿತನ ಪ್ಲ್ಯಾಟಿಗೆ ಬಂದಿದ್ದ ಕಿರಿಯ ಕಲಾವಿದೆಯರು ರಾತ್ರಿ ನಶೆಯಲ್ಲಿ ತೇಲಾಡಿದ್ದರು: ಬೆನ್ನಲ್ಲೇ ನಡೆಯಿತು ಭಾರೀ ದುರಂತ

ಹೈದರಾಬಾದ್​: ನಗರದ ಗಾಚಿಬೌಲಿಯಲ್ಲಿ ಡಿ.18ರ ನಸುಕಿನ ಜಾವ 3.30ರ ಸುಮಾರಿಗೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕಿರಿಯ ಕಲಾವಿದೆಯರು ಹಾಗೂ ಓರ್ವ ಬ್ಯಾಂಕ್​ ಉದ್ಯೋಗಿ ದಾರುಣವಾಗಿ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅಪಘಾತದ ಭೀಕರತೆಗೆ ಕಿರಿಯ ಕಲಾವಿದೆಯರಾದ ಮಾನಸ ಎಂ (21) ಹಾಗೂ ಮಾನಸ ಎನ್​ (23) ಮತ್ತು ಬ್ಯಾಂಕ್​ ಉದ್ಯೋಗಿ ಅಬ್ದುಲ್​ ರಹೀಂ(25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಕಿರಿಯ ಕಲಾವಿದ ಸಾಯಿಸಿಧು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


ಗಾಯಾಳು ಸಾಯಿ ಸಿಧು ಕೂಡಾ ಸೀರಿಯಲ್​ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ. ಈತ ಗಾಚಿಬೌಲಿಯ ಜೆ.ವಿ. ಕಾಲನಿ ನಿವಾಸಿಯಾಗಿದ್ದ. ಅಬ್ದುಲ್​ ರಹೀಮ್​ ವಿಜಯವಾಡ ಮೂಲದವನಾಗಿದ್ದು, ಮಧಪುರ್​ನ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿ ಆಗಿದ್ದ. ಮಾನಸ ಎಂ ಹಾಗೂ ಮಾನಸ ಎನ್​ ಅಮರಪೇಟೆಯ ಹಾಸ್ಟೆಲ್​ನಲ್ಲಿ ವಾಸವಿದ್ದರು. ಇಬ್ಬರು ಟಿವಿ ಸೀರಿಯಲ್​ನಲ್ಲಿ ಕಿರಿಯ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಮಾನಸ ಎನ್​ ಬೆಂಗಳೂರು ಮೂಲದವಳಾಗಿದ್ದಳು. ಅವಳ ತಂದೆ ಸಿ.ಎಂ. ನಾರಾಯಣಮೂರ್ತಿ ಓರ್ವ ರಾಜಕಾರಣಿ. ಮೂರು ದಿನಗಳ ಹಿಂದೆಯಷ್ಟೇ ಆಕೆ ಸಾಯಿಸಿಧು ಫ್ಲ್ಯಾಟ್​ಗೆ ಬಂದಿದ್ದಳು. ಮಾನಸ ಎಂ ಎಂಬಾಕೆ ಸಾಯಿಸಿಧುಗೆ ಇನ್​ಸ್ಟಾಗ್ರಾಂ ಮೂಲಕ ಪರಿಚಿತಳಾಗಿದ್ದಳು. ಶುಕ್ರವಾರ ಬೆಳಗ್ಗೆ ಸಿಧು ಫ್ಲ್ಯಾಟ್​ಗೆ ಬಂದಿದ್ದಳು. 

ಅಬ್ದುಲ್​​ ರಹೀಂ ಅದೇ ಫ್ಲ್ಯಾಟ್​ಗೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ. ಈ ಸಂದರ್ಭ ಸಾಯಿಸಿಧು ಹೊರತುಪಡಿಸಿ ಉಳಿದ ಮೂವರು ರಾತ್ರಿ ಮದ್ಯಪಾನ ಮಾಡಿದ್ದರು. ಬಳಿಕ ಮಧ್ಯರಾತ್ರಿ ಟೀ ಕುಡಿಯಲೆಂದು ಕಾರು ತೆಗೆದುಕೊಂಡು ಹೊರ ಹೋಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಅಬ್ದುಲ್​ ರಹೀಂ, ಮದ್ಯದ ಅಮಲಿನಲ್ಲಿದ್ದ. ಅವನ ಪಕ್ಕದ ಸೀಟಿನಲ್ಲಿ ಸಾಯಿ ಸಿಧು ಕುಳಿತಿದ್ದ.

ಹಿಂಬದಿ ಸೀಟಿನಲ್ಲಿ ಇಬ್ಬರೂ ಮಾನಸರು ಕುಳಿತಿದ್ದರು. ಮೊದಲೇ ಮತ್ತಿನಲ್ಲಿದ್ದ ಅಬ್ದುಲ್​ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಸಾಯಿಸಿಧು ಎಷ್ಟೇ ಹೇಳಿದರೂ ಅವನ ಮಾತಿಗೆ ಕ್ಯಾರೆ ಎನ್ನದೆ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ. ರಾತ್ರಿ 2.10ರ ಸುಮಾರಿಗೆ 140 ಕಿ.ಮೀ ವೇಗದಲ್ಲಿದ್ದ ಕಾರು ಅಬ್ದುಲ್​ ನಿಯಂತ್ರಣ ತಪ್ಪಿ ಹೈದರಾಬಾದ್​ನ ಕೇಂದ್ರೀಯ ವಿಶ್ವವಿದ್ಯಾಲಯದ ಬಳಿಯಿರುವ ರೇಣುಕಾ ಎಲ್ಲಮ್ಮ ದೇವಸ್ಥಾನದ ಪಕ್ಕದ ಮರ ಒಂದಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರ ಎರಡು ಭಾಗವಾಗಿದೆ.  ಪರಿಣಾಮ ಸ್ಥಳದಲ್ಲೇ ಮಾನಸ ದ್ವಯರು ಹಾಗೂ ಅಬ್ದುಲ್​ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಾಯಿಸಿಧುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 


ಇಬ್ವರೂ ಮಾನಸಂದಿರೂ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಹೊರಕ್ಕೆ ಹಾರಿದರೆ, ಅಬ್ದುಲ್​ ರಹೀಂ ಚಾಲಕನ​ ಸೀಟಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದ. ಬಲೂನ್​ ತೆರೆದುಕೊಂಡಿದ್ದರಿಂದ ಸಾಯಿ ಸಿಧು ಬದುಕುಳಿದಿದ್ದಾನೆ. ಮೃತದೇಹಗಳನ್ನು ಪೊಲೀಸರು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಬ್ದುಲ್​ ರಹೀಂ ಅಪಘಾತಗೊಂಡ ಕಾರನ್ನು ಕೆಲವೇ ದಿನಗಳ ಹಿಂದಷ್ಟೇ ಬಾಡಿಗೆ ಪಡೆದಿದ್ದ ಎಂದು ತಿಳಿದುಬಂದಿದೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article