-->

ಮದುವೆಯಾಗಿ ನಾಲ್ಕೇ ದಿನಕ್ಕೆ ಮಸಣ ಸೇರಿದ ದಂಪತಿ: ಯಾರ ದೃಷ್ಟಿ ಬಿತ್ತೋ ಈ ಜೋಡಿಗೆ

ಮದುವೆಯಾಗಿ ನಾಲ್ಕೇ ದಿನಕ್ಕೆ ಮಸಣ ಸೇರಿದ ದಂಪತಿ: ಯಾರ ದೃಷ್ಟಿ ಬಿತ್ತೋ ಈ ಜೋಡಿಗೆ

ತಿರುವಳ್ಳೂರು: ಮದುವೆಯಾಗಿ ಇನ್ನೇನು ನಾಲ್ಕು ದಿನವಷ್ಟೇ ಆಗಿತ್ತು. ಹೊಸ ಜೀವನದ ಸುಖದ ಸುಪ್ಪತ್ತಿಗೆಯಲ್ಲಿ ತಮ್ಮ ಮುಂದಿನ ಬಾಳಿನ ಸವಿಗನಸು ಕಾಣುತ್ತಿದ್ದ ಈ ಜೋಡಿಯನ್ನು ಕೊಂಡೊಯ್ಯಲು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುವಿನಲ್ಲಿ ಜವರಾಯ ಕಾಯುತ್ತಿದ್ದ. ಇದೀಗ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ. 

ಹೌದು ಅರಕ್ಕೊಣಮ್​ ಮೂಲದ ಮನೋಜ್​ ಕುಮಾರ್​ (31) ಹಾಗೂ ಪೆರುಗಲಥೂರ್​ ಮೂಲದ ಕಾರ್ತಿಕಾ (30) ವಿವಾಹವಾಗಿ ಕೇವಲ ನಾಲ್ಕು ದಿನಗಳಷ್ಟೇ ಕಳೆದಿತ್ತು. ಆದರೆ ಈ ನವಜೋಡಿಯೀಗ ಭೀಕರ ರಸ್ತೆ ಅಪಘಾತವೊಂದಕ್ಕೆ ದಾರುಣವಾಗಿ ಬಲಿಯಾಗಿದೆ. ಈ ರಸ್ತೆ ಅಪಘಾತ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದ್ದು,  ಕಾಂಕ್ರಿಟ್​ ಮಿಕ್ಸರ್​ ಲಾರಿಯು ಇವರು ಸಂಚರಿಸುತ್ತಿದ್ದ ಕಾರಿನ ಮೇಲೆಯೇ ಬಿದ್ದು ದಂಪತಿಗಳೀರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಮನೋಜ್​ ಕುಮಾರ್​ ಮೆಡಿಕಲ್​ ರೆಪ್​ ಆಗಿ ಉದ್ಯೋಗ ಮಾಡುತ್ತಿದ್ದು, ಕಾರ್ತಿಕಾ ಖಾಸಗಿ ಕ್ಲೀನಿಕೊಂದರಲ್ಲಿ ವೈದ್ಯೆ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಕ್ಟೋಬರ್​ 28ರಂದು ಇಬ್ಬರಿಬ್ಬರು ವಿವಾಹವಾಗಿದ್ದರು. ಭಾನುವಾರ ದಂಪತಿ ಕಾರ್ತಿಕಾ ಮನೆಗೆ ಹೋಗಿ ಮರಳಿ ಅರಕ್ಕೊಣಮ್​ಗೆ ವಾಪಸ್ ಆಗುತ್ತಿದ್ದರು. ಪೂನಮೆಲೀ-ಅರಕ್ಕೊಣಮ್​ ಹೆದ್ದಾರಿ ಮಧ್ಯದಲ್ಲಿರುವ ಕಡಂಬಥೂರ್​ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 

ಇವರು ಸಂಚಾರ ಮಾಡುತ್ತಿದ್ದ ಕಾರು ಪೂನಮೆಲೀ- ಅರಕ್ಕೊಣಮ್​ ಹೆದ್ದಾರಿ ಮಧ್ಯದಲ್ಲಿರುವ ಕಡಂಬಥೂರ್​ ಸಮೀಪ ಬರುತ್ತಿರುವಾಗ ಎದುರಿನಿಂದ ಬರುತ್ತಿದ್ದ ಕಾಂಕ್ರಿಟ್​ ಮಿಕ್ಸರ್​ ಲಾರಿಯು ತಿರುವು ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ​ ಕಾರಿನ ಮೇಲೆ ಬಿದ್ದಿದೆ. ಮಿಕ್ಸರ್​ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರೊಳಗಿದ್ದ ಮನೋಜ್​ ಕುಮಾರ್​‌ ಹಾಗೂ ಕಾರ್ತಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಎರಡು ಗಂಟೆಯ ಬಳಿಕ ಕಾಂಕ್ರೀಟ್ ಮಿಕ್ಸರ್​ ಲಾರಿಯನ್ನು ತೆರವುಗೊಳಿಸಲಾಗಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಂಬ್ಯುಲೆನ್ಸ್​ ದೌಡಾಯಿಸಿತ್ತು.  ಆದರೆ, ಅಷ್ಟರಲ್ಲಾಗಲೇ ದಂಪತಿ ಸಾವಿಗೀಡಾಗಿದ್ದರು. ಮೃತದೇಹಗಳನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಬಳಿಕ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ಘಟನೆ ನಡೆದ ತಕ್ಷಣ ಮಿಕ್ಸರ್​ ಲಾರಿ ಡ್ರೈವರ್​ ಎಸ್ಕೇಪ್​ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article