ಆಟೊ ಚಾಲಕನ ಪ್ರೀತಿ ಬಲೆಗೆ ಬಿದ್ದ ಬಿ.ಟೆಕ್ ವಿದ್ಯಾರ್ಥಿನಿ: ದೈಹಿಕ ಸಂಪರ್ಕದ ಬಳಿಕ ಪ್ರಿಯಕರ ಹೇಳಿದ್ದೇನು?

ಹೈದರಾಬಾದ್​: ಆಟೋ ಚಾಲಕನೋರ್ವನ ಪ್ರೀತಿಯ ಬಲೆಯಲ್ಲಿ ಬಿದ್ದು ವಂಚನೆಗೊಳಗಾದ ಬಿಟೆಕ್ ವಿದ್ಯಾರ್ಥಿನಿಯೋರ್ವಳು ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಹಯಾತ್​ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಟೋ ಚಾಲಕ ತನ್ನನ್ನು ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು
ವಂಚಿಸಿದ್ದಾನೆಂದು ಆರೋಪಿಸಿ  ಪ್ರಿಯಕರನ ವಿರುದ್ಧ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಟೋ ಚಾಲಕನಾಗಿ ದುಡಿಯುತ್ತಿರುವ ಹೈದರಾಬಾದ್​ನ ಚಂಪಪೇಟ್​‌ ನಿವಾಸಿ ರಾಟ್ಲವತ್​ ಶಂಕರ್​ (24) ವಿರುದ್ಧ ದೂರು ದಾಖಲಾಗಿದೆ. 
 
ಬಿ.ಟೆಕ್​ ವಿದ್ಯಾರ್ಥಿನಿ ಹಯಾತ್​ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದಳು. ರಾಟ್ಲವತ್​ ಶಂಕರ್ ಹಾಗೂ ಸಂತ್ರಸ್ತೆಯ ಅಣ್ಣ ಸ್ನೇಹಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇವಬ್ಬರ ನಡುವೆ ಪರಿಚಯವಾಗಿತ್ತು. ದಿನ ಕಳೆದಂತೆ ಪರಿಚಯ ಸ್ನೇಹಕ್ಕೆ ತಿರುಗಿದ್ದು, ಆಗಾಗ ಭೇಟಿ ಮಾಡತೊಡಗಿದ್ದರು. ಅದೇ ರೀತಿ ಒಂದು ದಿನ ಶಂಕರ್, ವಿದ್ಯಾರ್ಥಿನಿ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಯುವತಿಯೂ ಇದಕ್ಕೆ ಸಮ್ಮತಿ ಸೂಚಿಸಿದ್ದಳು.

ಇಬ್ಬರು ಆಗಾಗ ಹೊರಗಡೆ ಸುತ್ತಾಡುವುದು ಮಾಡುತ್ತಿದ್ದರು. ಈ ನಡುವೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆಯಿತು. ಇದೀಗ ಶಂಕರ್​ ತನ್ನ ವರಸೆಯನ್ನೇ ಬದಲಿಸಿದ್ದು, ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾನೆ. ಅಲ್ಲದೆ ತನಗೆ ಆಕೆಯನ್ನು ಮದುವೆಯಾಗುವ ಉದ್ದೇಶ ಇರಲಿಲ್ಲ ಎನ್ನುತ್ತಿದ್ದಾನೆ. 

ತಾನು ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ, ಹಯಾತ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಶಂಕರ್​ ಪತ್ತೆಗೆ ಬಲೆ ಬೀಸಿದ್ದಾರೆ.