Daivasthana suspected released | ದೈವಸ್ಥಾನ ಅಪವಿತ್ರ ಪ್ರಕರಣ: ಶಂಕಿತ ಆರೋಪಿಗಳ ವಿರುದ್ಧ ಸಾಕ್ಷ್ಯ ಅಲಭ್ಯ






ಮಂಗಳೂರು ನಗರದ ವಿವಿಧೆಡೆ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅನಪೇಕ್ಷಿತ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸಿದ ಪ್ರಕರಣ ಇನ್ನೂ ನಿಗೂಢವಾಗಿದೆ. ಇತ್ತೀಚೆಗೆ ತಪ್ಪು ಕಾಣಿಕೆ ಹಾಕಲು ಬಂದ ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದು, ಅವರಿಂದ ಯಾವುದೇ ತಪ್ಪೊಪ್ಪಿಗೆ ಹಾಗೂ ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯ ಲಭಿಸಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.


ಶಂಕಿತ ಆರೋಪಿಗಳಾದ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಅವರನ್ನು ಠಾಣೆಗೆ ಕರೆಯಿಸಿ ನಾಲ್ಕು ದಿನಗಳೊಂದ ವಿಚಾರಣೆಗೊಳಪಡಿಸಲಾಗಿತ್ತು.


ಯಾವುದೇ ಸಾಕ್ಷ್ಯ ಲಭಿಸದ ಕಾರಣ ಅವರ ವಿರುದ್ಧ ಕಲಂ 169 ಅಡಿ ಪ್ರಕರಣ ದಾಖಲಿಸಿ ಮುಚ್ಚಳಿಕೆ ಪಡೆದು ಬಿಡುಗಡೆ ಮಾಡಲಾಗಿದೆ.


ಆದರೆ, ಬಿಡುಗಡೆಗೊಂಡವರು ಈಗಲೂ ಶಂಕಿತ ಆರೋಪಿಗಳೇ ಆಗಿದ್ದಾರೆ. ಸಾಕ್ಷ್ಯ ದೊರೆತ ಕೂಡಲೇ ಬಂಧಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.


ನಮ್ಮ ಸ್ನೇಹಿತ ನವಾಜ್ ಎಂಬಾತ ಮಂಗಳೂರಿನ ಕೆಲವು ದೈವಸ್ಥಾನಗಳನ್ನು ಅಪವಿತ್ರ ಮಾಡುವ ಕೃತ್ಯದಲ್ಲಿ ಭಾಗಿಯಾಗಿದ್ದ. ಅದರಿಂದಲೇ ಆತ ಆತ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ನಮಗೂ ಇದೇ ರೀತಿಯ ಭಯವಾಗುತ್ತಿದೆ. ಅದಕ್ಕಾಗಿ ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದೆವು ಎಂದು ವಿಚಾರಣೆಗೆ ಒಳಪಟ್ಟ ಆರೋಪಿಗಳು ಹೇಳಿಕೊಂಡಿದ್ದರು.


ಆದರೆ, ಅವರು ದೈವಸ್ಥಾನ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡ ಬಗ್ಗೆ ದೃಢವಾದ ಸಾಕ್ಷ್ಯ ಲಭ್ಯವಾಗಿಲ್ಲ. ಹಾಗಾಗಿ ಪೂರಕ ಸಾಕ್ಷ್ಯ ಲಭ್ಯವಾದ ಬಳಿಕ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu