case lodged against expert college | ಸರ್ಕಾರದ ಆದೇಶ ಉಲ್ಲಂಘನೆ: ಎಕ್ಸ್ಪರ್ಟ್ ಕಾಲೇಜು, ನರೇಂದ್ರ ನಾಯಕ್, ಆಡಳಿತ ವಿರುದ್ಧ ಪ್ರಕರಣ ದಾಖಲು
ಮಂಗಳೂರಿನ ಪ್ರತಿಷ್ಠಿತ ಎಕ್ಸ್ಪರ್ಟ್ ಕಾಲೇಜು ವಿರುದ್ಧ ಕೊನೆಗೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಲಾಕ್ ಡೌನ್ ಆದೇಶ ಇದ್ದರೂ ಶಿಕ್ಷಣ ಸಂಸ್ಥೆ ನಡೆಸಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ. ಈ ಮೂಲಕ ಕೋವಿಡ್ ಸಾಂಕ್ರಮಿಕ ರೋಗ ಹರಡು ಕಾರಣರಾಗಿರುತ್ತಾರೆ ಎಂದು ಪೊಲೀಸರು ಎಕ್ಸ್ಪರ್ಟ್ ಸಂಸ್ಥೆ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಎಪ್ರಿಲ್ 19ರಂದು ಬೆಳಿಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ವಳಚ್ಚಿಲ್ ಪ್ರದೇಶದಲ್ಲಿ ಇರುವ ಎಕ್ಸ್ ಪರ್ಟ್ ಕಾಲೇಜು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ದ್ವಿತೀಯ ಪಿ.ಯು.ಸಿ ಯ 30 ಜನ ವಿಧ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ವಿದ್ಯಾಸಂಸ್ಥೆಯಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದೆ.
ಈ ವಿದ್ಯಾರ್ಥಿಗಳ ಹೆತ್ತವರು ಹಾಗೂ ಪೋಷಕರು ವಿಧ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಸಲುವಾಗಿ ದೂರದ ಊರಿನಿಂದ ಬಂದಿದ್ದರು. ಆದರೆ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಕಳಿಸಲು ಅವಕಾಶ ಕೊಡಲಿಲ್ಲ. ಬದಲಿಗೆ, ಶಿಕ್ಷಣ ಸಂಸ್ಥೆಯಲ್ಲೇ ಉಳಿಯುವಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ.
ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ, ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದರೂ ಕೂಡಾ ಸರ್ಕಾರದ ಈ ಆದೇಶವನ್ನು ಧಿಕ್ಕರಿಸಿ ಎಕ್ಸ್ಪರ್ಟ್ ಸಂಸ್ಥೆ ತಮ್ಮ ಶೈಕ್ಷಣಿಕ ಚಟುವಟಿಕೆ ನಡೆಸಿ ಕೋವಿಡ್ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗಿರುತ್ತಾರೆ ಎಂದು ಪೊಲೀಸರು ತಮ್ಮ ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿಕೊಂಡಿದ್ಧಾರೆ.
ವಿದ್ಯಾಸಂಸ್ಥೆಯವರಿಂದ ಸರ್ಕಾರದ ಆದೇಶ ಉಲ್ಲಂಘನೆ ಆಗಿರುವುದರಿಂದ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ನರೇಂದ್ರ ನಾಯಕ್ ಮತ್ತು ಆಡಳಿತ ಮಂಡಳಿಯ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಕಲಂ 5(1), 5(4) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ಧಾರೆ.