-->

Bantwal advocates protest against FIR | ಬಂಟ್ವಾಳದ ವಕೀಲ ರಾಜೇಶ್ ವಿರುದ್ಧ ಎಫ್‌ಐಆರ್: ವಕೀಲರ ಸಂಘ ಆಕ್ರೋಶ

Bantwal advocates protest against FIR | ಬಂಟ್ವಾಳದ ವಕೀಲ ರಾಜೇಶ್ ವಿರುದ್ಧ ಎಫ್‌ಐಆರ್: ವಕೀಲರ ಸಂಘ ಆಕ್ರೋಶ



ಪ್ರಕರಣ ರದ್ದುಪಡಿಸಲು ಆಗ್ರಹ

ಎಫ್.ಐ.ಆರ್. ದಾಖಲಿಸಿದ ಎಸ್ಸೈ ವಿರುದ್ಧ ಆಕ್ರೋಶ

ದಲಿತ ದೌರ್ಜನ್ಯ ಕಾಯ್ದೆ ದುರುಪಯೋಗಕ್ಕೆ ಖಂಡನೆ


ಬಂಟ್ವಾಳದ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವಿರುದ್ಧದ ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ತಕ್ಷಣ ಪೊಲೀಸರು ಹಿಂದಕ್ಕೆ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ಒತ್ತಾಯಿಸಿದ್ದಾರೆ.


ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಒತ್ತಾಯ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಜನವರಿ 9ರಂದು ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ತಮ್ಮ ಕಚೇರಿ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾ ಮಣಿನಾಲ್ಕೂರು ಗ್ರಾಮದ ಪೂಪಾಡಿ ಕಟ್ಟೆ ಎಂಬಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಾರನ್ನು ಅಡ್ಡಗಟ್ಟಿರುವ ಕೆಲವು ಕಿಡಿಗೇಡಿ ಯುವಕರ ತಂಡ ಕಾರಿನಿಂದ ಕೆಳಗಿಳಿಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಗೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದೆ. ಆದರೆ ರಾಜೇಶ್ ತಮ್ಮ ಕಾರಿನಿಂದ ಇಳಿಯದೆ ಸೀದಾ ತಮ್ಮ ಮನೆಗೆ ತೆರಳಿದ್ದಾರೆ ಎಂದು ವಿವರಿಸಿದರು.


ಯುವಕರ ತಂಡ ಕಾರನ್ನು ಅಡ್ಡಗಟ್ಟಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆಯ ಸಂಪೂರ್ಣ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ನ್ಯಾಯವಾದಿ ರಾಜೇಶ್, ಅದನ್ನು ಆಧಾರವಾಗಿಟ್ಟುಕೊಂಡು ಜನವರಿ 10ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.


ಇದಕ್ಕೆ ಪ್ರತಿಯಾಗಿ, ಆ ಕಿಡಿಗೇಡಿಗಳ ತಂಡ ಪರಿಶಿಷ್ಟ ಜಾತಿಗೆ ಸೇರಿದ ಓರ್ವ ಯುವಕ ಮತ್ತು ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ನ್ಯಾಯವಾದಿ ರಾಜೇಶ್ ಮತ್ತು ಅವರ ತಂದೆ ನಾರಾಯಣ ಪೂಜಾರಿ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈ ದೂರನ್ನು ಪೊಲೀಸರು ಸ್ವೀಕರಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ‌ ಎಂದು ತಿಳಿಸಿದರು.


ನ್ಯಾಯವಾದಿ ರಾಜೇಶ್ ನೀಡಿದ ದೂರನ್ನು ಜನವರಿ 10ರಂದು ಅಪರಾಹ್ನ 3:30ಕ್ಕೆ ಠಾಣಾಧಿಕಾರಿ ಸ್ವೀಕರಿಸಿದ್ದಾರೆ.



ವಕೀಲರ ವಿರುದ್ಧ ನೀಡಲಾದ ಸುಳ್ಳು ದೂರನ್ನು ಪರಾಮರ್ಶೆ ನಡೆಸದೆ ಠಾಣೆಯ ಪ್ಯಾನಲ್ ವಕೀಲರ ಸಲಹೆಯನ್ನು ಪಡೆಯದೆ ಹಾಗೂ ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೂ ತರದೆ, ಮೇಲಾಧಿಕಾರಿಗಳ ಸಲಹೆಯನ್ನೂ ಪಡೆಯದೆ, ಸತ್ಯಾಂಶವನ್ನು ವಿಮರ್ಶಿಸದೆ ಠಾಣಾಧಿಕಾರಿ ಎಫ್.ಐ.ಆರ್. ದಾಖಲಿಸಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಒತ್ತಡ ಇದೆ ಎಂದು ಅವರು ದೂರಿದರು.


ನ್ಯಾಯವಾದಿಗಳ ವಿರುದ್ಧ ನೀಡಿರುವ ದೂರಿನಲ್ಲಿ ಸತ್ಯಾಂಶ ಇಲ್ಲ. ಇದು ಗೊತ್ತಿದ್ದರೂ ಯಾರದ್ದೋ ಒತ್ತಡಕ್ಕೆ ಮಣಿದು ಎಫ್.ಐ.ಆರ್. ದಾಖಲಿಸಲಾಗಿದೆ. ಠಾಣೆಯ ಎಸ್ಸೈ ಕ್ರಮವನ್ನು ಬಂಟ್ವಾಳ ವಕೀಲರ ಸಂಘ ತುರ್ತು ಸಭೆ ನಡೆಸಿ ಖಂಡಿಸಿದೆ ಎಂದು ಉಮೇಶ್ ತಿಳಿಸಿದರು.


ಸಾರ್ವಜನಿಕವಾಗಿ ಕಾರ್ಯ ನಿರ್ವಹಿಸುವ ವಕೀಲರ ವಿರುದ್ಧ ಈ ರೀತಿಯ ಸುಳ್ಳು ದೂರುಗಳು ಬಂದ ಕೂಡಲೇ ಯಾವುದೇ ಪೂರ್ವ ಪರ ವಿಚಾರಣೆ ನಡೆಸದೆ ಯಾರದ್ದೋ ಒತ್ತಡಕ್ಕೆ ಮಣಿದು ಎಫ್.ಐ.ಆರ್.‌ ದಾಖಲಿಸಲಾಗಿದೆ. ಈ ಘಟನೆಯಿಂದ ಮುಂದೆ ಇಂತಹ ಹಲವು ಪ್ರಕರಣಗಳಿಗೆ ಇದು ನಾಂದಿಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.


ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ರಾವ್ ಪುಂಚಮೆ ಮಾತನಾಡಿ, ದಲಿತರಿಗೆ ಜಾತಿ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ತಡೆಯಲು ದಲಿತ ದೌರ್ಜನ್ಯ ಕಾಯ್ದೆ ಜಾರಿಯಲ್ಲಿದೆ. ಆದರೆ, ಕೆಲವರು ವೈಯಕ್ತಿಕ ಹಾಗೂ ಕ್ಷುಲ್ಲಕ ಕಾರಣಗಳಿಗೆ ಈ ಕಾಯ್ದೆಯನ್ನು ದುರುಪಯೋಗ ಪಡಿಸುತ್ತಿದ್ದಾರೆ. ಇದು ಖಂಡನೀಯವಾಗಿದೆ. ಇಂತಹ ಘಟನೆಗಳಿಂದಾಗಿ ಕಾಯ್ದೆಯ ಮಹತ್ವ ಕಳೆದುಕೊಳ್ಳುತ್ತಿದ್ದು, ನೈಜ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.



ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಸದಸ್ಯರಾದ ಮೋಹನ್ ಕುಮಾರ್ ಕಡೇಶಿವಾಲಯ, ಬಿ.ವಿ.ಶೆಣೈ, ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article