ಹಾವೇರಿ: ಹುಬ್ಬಳ್ಳಿ, ಕೊಪ್ಪಳ ಆಯ್ತು. ಈಗ ಹಾವೇರಿಯಲ್ಲಿ ಲವ್ ಜಿಹಾದ್ ಆರೋಪ ಸದ್ದು ಮಾಡುತ್ತಿದೆ. ನಿಶ್ಚಿತಾರ್ಥಕ್ಕೆ ಇನ್ನೊಂದು ದಿನ ಇರುವಾಗಲೇ ರಾತ್ರೋರಾತ್ರಿ ಹಿಂದೂ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿ ಕುಟುಂಬಕ್ಕೆ ಶಾಕ್ ನೀಡಿದ ಘಟನೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಗ್ರಾಮದ ನಿವಾಸಿ ಶಂಕ್ರಮ್ಮ ಎಂಬ ಯುವತಿಗೆ ರವಿವಾರ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಕುಟುಂಬಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮೇ 11ಕ್ಕೆ ವಿವಾಹಕ್ಕೆ ದಿನವೂ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಶಂಕ್ರಮ್ಮ ನಾಪತ್ತೆಯಾಗಿದ್ದಾಳೆ.
ಇಬ್ರಾಹಿಂ ನೆಗಳೂರು ಎಂಬ ಯುವಕ ತಮ್ಮ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದು ಆಡೂರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಇದು ವ್ಯವಸ್ಥಿತ 'ಲವ್ ಜಿಹಾದ್' ಎಂದು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಬ್ರಾಹಿಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಕೈಮೀರುವ ಮುನ್ನ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.