ಬಾವನೊಂದಿಗೆ ಕಳ್ಳ ಸಂಬಂಧ ಪತಿಯ ಹತ್ಯೆಗೆ ಪತ್ನಿ ಸ್ಕೆಚ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ತಮ್ಮನ ಹೆಣ



ಹಾಸನ: ಆತ ತಾನಾಯ್ತು ತನ್ನ ಸಂಸಾರವಾಯ್ತುವೆಂದು ಬದುಕುತ್ತಿದ್ದವನು. ಆದರೆ ತನ್ನ ಸಹೋದರನಿಗೆ ತೋರಿದ ಪ್ರೀತಿ, ಕಾಳಜಿಯೇ ಆತನ ಬದುಕನ್ನೇ ನಾಶ ಮಾಡಿತು. ನಾದಿನಿಯ ಮೇಲೆ ಮೇಲೆ ಕಣ್ಣು ಹಾಕಿದ ಕಿರಾತಕ ಸಹೋದರ ತನ್ನ ತಮ್ಮನ ಹೆಣ ಬೀಳಿಸಿದ್ದಾನೆ.

ಗುರುತೇ ಸಿಗದಂತೆ ನೀರಿನಲ್ಲಿ ಮೃತದೇಹವಾಗಿ ಪತ್ತೆಯಾದವನ ಹಾಸನದ ಮುಕುಂದೂರು ಹೊಸಳ್ಳಿ ಗ್ರಾಮದ ನಿವಾಸಿ ಆನಂದ್. 10 ವರ್ಷಗಳ ಹಿಂದೆ ಅರ್ಚಿತಾ ಎಂಬಾಕೆಯೊಂದಿಗೆ ಆತನಿಗೆ ಮದುವೆಯಾಗಿತ್ತು. ಕೂಲಿ ಕೆಲಸ ಮಾಡುತ್ತಿದ್ದರೂ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಈ ಸುಂದರ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದು ಇವನ ಸೋದರ ಸಂಬಂಧಿ ಸೋಮಶೇಖ‌ರ್.

ಮೂರು ವರ್ಷಗಳ ಹಿಂದೆ ಸೋಮಶೇಖ‌ರ್ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆದ್ದರಿಂದ ಊಟ, ತಿಂಡಿಗೆ ತಮ್ಮಮನೆಗೆ ಬರುವಂತೆ ಆನಂದ ಹೇಳಿದ್ದ. ಆದ್ರೆ ಆತ ಊಟ, ತಿಂಡಿಗೆ ಕರೆದು ಉಪಚಾರ ಮಾಡಿದ್ದ ಆನಂದನ ಹೆಂಡತಿ ಮೇಲೆಯೇ ಕಣ್ಣು ಹಾಕಿದ್ದಾನೆ. ಆನಂದನ ಪತ್ನಿ ಅರ್ಚಿತಾಳೊಂದಿಗೆ ಅನೈತಿಕ ಸಂಬಂಧವನ್ನೂ ಬೆಳೆಸಿದ್ದ. ಈ ವಿಚಾರ ಗೊತ್ತಾಗಿ ಆನಂದ, ಪತ್ನಿಗೆ ಬುದ್ಧಿಮಾತು ಹೇಳಿದ್ದ. ಆದ್ರೆ ಪತ್ನಿ ಅರ್ಚಿತಾ ಬುದ್ಧಿಮಾತಿಗೆ ಬಗ್ಗುವ ಮನಸ್ಥಿತಿಯಲ್ಲಿರಲಿಲ್ಲ. ಬದಲಿಗೆ ಸಂಬಂಧದಲ್ಲಿ ಬಾವನಾದ ಸೋಮಶೇಖರನ ಜತೆಗೂಡಿ ಗಂಡನ ಕಥೆ ಮುಗಿಸಲು ಸ್ಕೆಚ್ ರೆಡಿ ಮಾಡಿದ್ದಳು.

ಡಿ.26 ಆನಂದನಿಗೆ ಕರೆ ಮಾಡಿದ್ದ ಸೋಮಶೇಖರ ಹೇಮಾವತಿ ನಾಲೆಯ ದಡದಲ್ಲಿ ಆನಂದನಿಗೆ ಕಂಠಪೂರ್ತಿ ಕುಡಿಸಿ, ಆನಂದನನ್ನು ನಾಲೆಗೆ ತಳ್ಳಿ ಮನೆಗೆ ತೆರಳಿದ್ದ. ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲು ಸೋಮಶೇಖರ ಪ್ಲಾನ್ ಮಾಡಿದ್ದ. ಇತ್ತ ಆನಂದನ ಪತ್ನಿ ಅರ್ಚಿತಾ ತನಗೇನೂ ಗೊತ್ತೆ ಇಲ್ಲ ಎನ್ನುವಂತೆ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಳು. ಸೋಮಶೇಖರ ಕೂಡ ಆನಂದನನ್ನ ಹುಡುಕುತ್ತಿರುವಂತೆ ನಾಟಕವಾಡಿದ್ದ. ಡಿ.28ರಂದು ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದನ ಮೃತದೇಹ ಪತ್ತೆಯಾಗಿತ್ತು.

ಸೋಮಶೇಖ‌ರ್ ಹಾಗೂ ಅರ್ಚಿತಾ ಅಕ್ರಮ ಸಂಬಂಧದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್‌ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಅರ್ಚಿತಾ ಹಾಗೂ ಸೋಮಶೇಖರ್‌ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಮದಾಸೆಗೆ ಅಕ್ಕರೆ ತೋರಿ ಅನ್ನ ಹಾಕಿದ ತಮ್ಮನನ್ನೇ ಕೊಂದು ಮುಗಿಸಿದ ಪಾಪಿ ಅಣ್ಣನಿಗೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ.
BREAKING NEWS
Loading latest news...
Join our WhatsApp Channel Powered By : Online Pudu