ಮಂಗಳೂರು: ಕುಕ್ಕೆ ದೇವಸ್ಥಾನದ ನೂತನ ಎಇಒ ಕ್ರಿಶ್ಚಿಯನ್ ಧರ್ಮದವರೆಂಬ ವಿವಾದ - ಇದು ಸುಳ್ಳುಸುದ್ದಿ ಎಂದ ಸಚಿವ ರಾಮಲಿಂಗ ರೆಡ್ಡಿ

ಮಂಗಳೂರು: ದ.ಕ‌.ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿರುವ ಯೇಸುರಾಜ್ ಅನ್ಯಧರ್ಮದವರೆಂಬ ವಿವಾದವನ್ನು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅಲ್ಲಗಳೆದು ಇದು ಸುಳ್ಳುಸುದ್ದಿ ಎಂದು ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದಾರೆ.


ಯೇಸುರಾಜ್ ಅವರ ಹೆಸರನ್ನು ಉಲ್ಲೇಖಿಸಿ ಅವರು ಹಿಂದೂ ಧರ್ಮದವರೇ ಅಥವಾ ಅನ್ಯಧರ್ಮಕ್ಕೆ ಸೇರಿದವರೇ ಎಂಬ ಚರ್ಚೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೆಸರಿನ ಆಧಾರದಲ್ಲಿ ಅಬ್ಯಧರ್ಮೀಯನೊಬ್ಬ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎಇಒ ಆಗಬಾರದೆಂದು ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಈ ವಿವಾದದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿ ಇದು ಬಿಜೆಪಿಯ ಮತ್ತೊಂದು ಫೇಕ್ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಜೊತೆಗೆ ಯೇಸುರಾಜ್ ಅವರು ಹಿಂದೂ ಎನ್ನುವುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಹಂಚಿಕೊಂಡಿದ್ದಾರೆ.


"ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಒ ಯೇಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಬಿಜೆಪಿ ಕರ್ನಾಟಕದ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸ್ಆ್ಯಪ್ ಫೇಕ್  ಯುನಿವರ್ಸಿಟಿ ಆಟವಾಗಿದೆ. ಅವರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಹತ್ತಿರ ಇರೋದರಿಂದ ಜನರನ್ನು ದಾರಿ ತಪ್ಪಿಸಿ ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದು ಸ್ಪಷ್ಟ" ಎಂದು ಹೇಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu