ಫಾರ್ಚುನರ್ ಕಾರು, 21ಲಕ್ಷ ವರದಕ್ಷಿಣೆ ನೀಡಿಲ್ಲವೆಂದು ಯುವತಿಯನ್ನು ಹೊಡೆದು ಕೊಂದ ಪತಿ ಮನೆಯವರು


ಲಖನೌ: ವಿವಾಹದ ಸಂದರ್ಭ ಟೊಯೋಟಾ ಫಾರ್ಚುನ‌ರ್ ಹಾಗೂ 21 ಲಕ್ಷ ರೂ. ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲಿಲ್ಲ ಎಂದು ಪತಿ ಮತ್ತು ಆತನ ಕುಟುಂಬ ಸದಸ್ಯರು ಯುವತಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಘಟನೆ ಉತ್ತರಪ್ರದೇಶ ಗ್ರೇಟ‌ರ್ ನೋಯ್ಡಾದಲ್ಲಿ ನಡೆದಿದೆ.

ಕರಿಷ್ಮಾ ಮೃತಪಟ್ಟ ದುರ್ದೈವಿ. ಮೃತಳ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಆರೋಪಿ ವಿಕಾಸ್ ಹಾಗೂ ಆತನ ತಂದೆ ಸೋಮ್‌ಪಾಲ್‌ನನ್ನು ವಶಕ್ಕೆ ಪಡೆದಿದ್ದಾರೆ.

2022ರ ಡಿಸೆಂಬರ್ ನಲ್ಲಿ ಕರಿಷ್ಮಾ ಹಾಗೂ ವಿಕಾಸ್ ವಿವಾಹ ನಡೆದಿತ್ತು. ಮದುವೆ ಸಂದರ್ಭ 11 ಲಕ್ಷ ಮೌಲ್ಯದ ಚಿನ್ನ ಮತ್ತು ಎಸ್‌ಯುವಿ ಕಾರನ್ನು ಉಡಗೊರೆಯಾಗಿ ನೀಡಲಾಗಿತ್ತು. ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ವಿಕಾಸ್ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಆ ಬಳಿಕ ರಾಜಿ ಸಂಧಾನ ನಡೆಸಿ 10 ಲಕ್ಷ ರೂಪಾಯಿ ಕೊಡಲಾಗಿತ್ತು.

ಇದಾದ ಕೆಲ ದಿನಗಳ ಬಳಿಕ ವಿಕಾಸ್ ಕುಟುಂಬಸ್ಥರು ಹೊಸ ಫಾರ್ಚುನ‌ರ್ ಕಾರು ಹಾಗೂ 21 ಲಕ್ಷ ರೂ. ಹಣ ತರುವಂತೆ ಪೀಡಿಸಲು ಆರಂಭಿಸಿದ್ದಾರೆ. ಇದಕ್ಕೆ ಕರಿಷ್ಮಾ ಒಪ್ಪದಿದ್ದಾಗ ಆಕೆಯ ಮೇಲೆ ವಿಕಾಸ್ ಹಾಗೂ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕರಿಷ್ಮಾಳ ಸಹೋದರ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಾದ ವಿಕಾಸ್ ಹಾಗೂ ಆತನ ತಂದೆ ಸೋಮ್‌ಪಾಲ್‌ನನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಾದ ತಾಯಿ ರಾಕೇಶ್, ಸಹೋದರಿ ರಿಂಕಿ ಸಹೋದರರಾದ ಸುನಿಲ್ ಮತ್ತು ಅನಿಲ್ ತಲೆಮಾರಿಸಿಕೊಂಡಿದ್ದು ಅವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu