ಶತಶತಮಾನಗಳಿಂದ ಡೈನೋಸಾರ್ ಮೊಟ್ಟೆಗಳನ್ನೇ ದೇವರೆಂದು ಪೂಜಿಸುತ್ತಿರುವ ಗ್ರಾಮಸ್ಥರು



ಮಧ್ಯಪ್ರದೇಶ್: ಇಲ್ಲಿನ ಧಾರ್ ಎಂಬ ಗ್ರಾಮದ ಜನರು ದೇವರೆಂದು ಪೂಜೆ ಮಾಡುತ್ತಿದ್ದ ದುಂಡಾಕಾರದ ಕಲ್ಲುಗಳನ್ನು ವಿಜ್ಞಾನಿಗಳು ಲಕ್ಷಾಂತರ ವರ್ಷಗಳ ಹಿಂದೆ ವಾಸವಿದ್ದ ಡೈನೋಸಾರ್‌ಗಳ ಮೊಟ್ಟೆಗಳೆಂದು ಪತ್ತೆ ಹಚ್ಚಿದ್ದಾರೆ. ನರ್ಮದಾ ಕಣಿವೆಯ ಅಂಚಿನಲ್ಲಿರುವ ಕುಕ್ಷಿ ತಹಸಿಲ್‌ನ ಪದಲ್ಯಾ ಎಂಬ ಗ್ರಾಮಸ್ಥರು, ಈ ದುಂಡಾಕಾರದ ಕಲ್ಲುಗಳನ್ನು ದೇವರೆಂದು ನೂರಾರು ವರ್ಷಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಆದರೆ, ಇಲ್ಲಿಗೆ ಭೇಟಿ ನೀಡಿರುವ ವಿಜ್ಞಾನಿಗಳು ಈ ಗ್ರಾಮದ ಜನತೆ ಮೂಜೆ ಮಾಡುತ್ತಿರುವುದು ಕಲ್ಲುಗಳಿಗಲ್ಲ, ಬದಲಾಲಾಗಿ ಪಳೆಯುಳಿಕೆಗಳ ರೂಪದಲ್ಲಿರುವ ಡೈನೋಸಾ‌ರ್ ಗಳ ಮೊಟ್ಟೆಗಳಿಗೆಂದು ಖಚಿತಪಡಿಸಿದ್ದಾರೆ. ಬೀರಬಲ್‌ ಸಾಕ್ಷಿ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ಲಭ್ಯವಾಗಿದೆ.

ನರ್ಮದಾ ಕಣಿವೆಯ ಈ ಪ್ರದೇಶದಲ್ಲಿ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಡೈನೋಸಾರ್‌ಗಳು ನೆಲೆಸಿದ್ದವು ಎಂಬ ನಂಬಿಕೆಯಿದೆ. ಇದಕ್ಕೆ ಪೂರಕ ಎಂಬುವಂತೆ ಈ ಪ್ರದೇಶಗಳಲ್ಲಿ ಲಕ್ನೋದ ಬೀರಬಲ್ ಸಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ (ಬಿಎಸ್‌ಐಪಿ) ನಿರ್ದೇಶಕರ ನೇತೃತ್ವದ ತಂಡವು  ಇತ್ತೀಚಿನ ಸಂಶೋಧನೆ ನಡೆಸಿತ್ತು. ಆಗ ಅಲ್ಲಿ ಪಳೆಯುಳಿಕೆಗಳ ರೂಪದಲ್ಲಿ ಮೊಟ್ಟೆಗಳಿರುವುದನ್ನು ಪತ್ತೆ ಹಚ್ಚಿದ್ದಾರೆ.

ನರ್ಮದಾ ಕಣಿವೆ ಪ್ರದೇಶದ ಜನತೆ ಕೃಷಿಕರಾಗಿದ್ದರಿಂದ ಕೃಷಿ ಚಟುವಟಿಕೆ ನಡೆಸುವಾಗ ಸಾಮಾನ್ಯವಾಗಿ ದುಂಡಗಿನ ಕಲ್ಲುಗಳು ದೊರಕಿಯೇ ದೊರಕುತ್ತದೆ. ಈ ಕಲ್ಲುಗಳನ್ನೇ ದೇವೆರೆಂದು ಇಲ್ಲಿನ ಗ್ರಾಮಸ್ಥರು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಆದರೆ ಡೈನೋಸಾರ್ ಮೊಟ್ಟೆಗಳನ್ನು ಪೂಜಿಸುತ್ತಿರುವುದುದಾಗಿ ವಿಜ್ಞಾನಿಗಳು ಮಾಹಿತಿ ಕೂಡ ಪಡೆದಿದ್ದಾರೆ. ಹೀಗೆ ಮೊಟ್ಟೆಯ ಬಗ್ಗೆ ಸಂಶೋಧನೆ ನಡೆಸಿದಾಗ, ಇಲ್ಲಿಯ ಜನರು ಈ ಡೈನೋಸಾರ್‌ನ ಪಳೆಯುಳಿಕೆ ಮೊಟ್ಟೆಯನ್ನು "ಕಾಕಡ್ ಭೈರವ್" ಎಂಬ ಹೆಸರಿನಿಂದ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿರುವುದನ್ನು ಅವರು ಕಂಡುಕೊಂಡಿದ್ದಾರೆ. ಪದಾಲ್ಯ ಗ್ರಾಮ ಮತ್ತು ಅದರ ಸುತ್ತಲಿನ ನಾಲೈದು ಗ್ರಾಮಗಳಲ್ಲಿ ಈ ಮೊಟ್ಟೆಗಳನ್ನು ಕುಲದೇವತೆಯಾಗಿ ಪೂಜಿಸಲಾಗುತ್ತದೆ. ಇದನ್ನು ಕಂಡ ತಂಡ ಇದರ ಹಿಂದಿನ ಕಥೆಯನ್ನು ಜಗತ್ತಿಗೆ ಸಾರಲು ಸಿದ್ಧತೆ ಆರಂಭಿಸಿದೆ.

ಜಿಲ್ಲೆಯ 120 ಕಿ.ಮೀ ಪ್ರದೇಶದಲ್ಲಿ ಈ ಮೊದಲು ಸುಮಾರು 256 ಡೈನೋಸಾ‌ರ್ ಮೊಟ್ಟೆಗಳು ಕಂಡು ಬಂದಿದ್ದವು. ಜೂನ್ 2023 ರಲ್ಲಿ ನೋಂದಾಯಿಸದ ಹೆಚ್ಚುವರಿ 20 ಹೊಸ ಡೈನೋಸಾರ್ ಮೊಟ್ಟೆಗಳು ಸಹ ಕಂಡು ಬಂದಿವೆ. ಇಲ್ಲಿನ ಜನರು ಡೈನೋಸಾ‌ರ್ ಮೊಟ್ಟೆಯ ಮೇಲೆ ಮುಖದ ಆಕಾರವನ್ನು ಕೆತ್ತಿ ತಮ್ಮ ಕುಲದೈವ ಕಾಕಡ್ ಭೈರವನೆಂದು ಪೂಜಿಸುತ್ತಿರುವ ಮಾಹಿತಿ ಇದೆ. ಕಲ್ಲಿನಂತಹ ವಸ್ತುವನ್ನು ಈ ಗ್ರಾಮಸ್ಥರು ತಮ್ಮ ಹೊಲಗಳ ಗದ್ದೆಯ ಮೇಲೆ ರೇಖೆಯ ಉದ್ದಕ್ಕೂ ಇಡುತ್ತಾರೆ. ಅದು ತಮ್ಮ ಹೊಲಗಳನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇವರದ್ದು. ಇದಲ್ಲದೇ, ದೀಪಾವಳಿ ವೇಳೆ ಗರ್ಭಿಣಿ ಜಾನುವಾರುಗಳನ್ನು ಈ ಕಲ್ಲಿನಂತಹ ವಸ್ತುವಿನ ಮೇಲೆ ಹಾಯಿಸುವ ಸಂಪ್ರದಾಯ ಸಹ ಇದೆ. ಹೀಗೆ ಮಾಡುವುದರಿಂದ ಗರ್ಭಿಣಿ ಪ್ರಾಣಿ ಮತ್ತು ಹುಟ್ಟುವ ಮಗು ಎರಡೂ ಆರೋಗ್ಯವಾಗಿರುತ್ತವೆ ಅನ್ನೋದು ಇವರ ನಂಬಿಕೆ. ಸದ್ಯ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ಬಿಎಸ್‌ಐಪಿ ಸಹಾಯ ಮಾಡಲಿದೆ. ಇಲ್ಲಿ ಕಂಡುಬರುವ ಎಲ್ಲ ವಸ್ತುಗಳ ದಾಖಲಾತಿ ಮತ್ತು 3ಡಿ ಮುದ್ರಣವನ್ನು ಸಿದ್ಧಪಡಿಸುವ ಕಾರ್ಯ ಕೂಡ ನಡೆಯಲಿದೆ ಎಂದು ಡಾ.ಶಿಲ್ಪಾ ತಿಳಿಸಿದ್ದಾರೆ.