ಮಂಗಳೂರು: ಶರಣ್ ಪಂಪ್ ವೆಲ್ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆ

ಮಂಗಳೂರು: ನಗರದ ಶ್ರೀ ಮಂಗಳಾದೇವಿ ದಸರಾ ಉತ್ಸವದ ಸಂದರ್ಭ ಹಿಂದೂಗಳ ಸಂತೆ ಅಂಗಡಿಗಳಲ್ಲಿ ಭಗವಾಧ್ವಜ ಅಳವಡಿಸಿ ಎಲ್ಲಾ ಹಿಂದೂಗಳು ಇಲ್ಲಿಯೇ ವ್ಯಾಪಾರ ಮಾಡಬೇಕೆಂದು ಮತೀಯ ಸೌಹಾರ್ದಕ್ಕೆ ಧಕ್ಕೆ ತರುವ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಿಎಚ್ ಪಿ ಮುಖಂಡ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್‌ ತಡೆ ನೀಡಿದೆ ಎಂದು ತಿಳಿದು ಬಂದಿದೆ.

ಮಂಗಳಾದೇವಿ ದೇವಸ್ಥಾನದ ಬಳಿಯ ದಸರಾ ಸಂತೆ ವ್ಯಾಪಾರದಲ್ಲಿ ಹಿಂದೂ ವ್ಯಾಪಾರಿಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್‌ವೆಲ್ ಮತ್ತಿತರರು ಕೇಸರಿ ಧ್ವಜ ಕಟ್ಟಿ ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ನಡೆಸುವಂತೆ ಕರೆ ನೀಡಿದ್ದರು. ಇದರ ವಿರುದ್ಧ ಮಂಗಳೂರಿನ ಸಮಾನ ಮನಸ್ಕರ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಗೆ ಮನವಿ ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಆ ಬಳಿಕ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರು ಬುಧವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಇದರ ವಿರುದ್ಧ ಶರಣ್ ಪಂಪ್‌ವೆಲ್ ಹೈಕೋರ್ಟ್‌ ಮೆಟ್ಟಿಲೇರಿದ್ದು ಪೊಲೀಸರು ದಾಖಲಿಸಿದ ಸ್ವಯಂಪ್ರೇರಿತ ದೂರಿಗೆ ಗುರುವಾರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯವಾದಿ ಅರುಣ್ ಶ್ಯಾಮ್ ಹೈಕೋರ್ಟ್‌ನಲ್ಲಿ ವಾದಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu