ಮಂಗಳೂರು: ಯುವಕನಿಗೆ ತಂಡದಿಂದ ಚೂರಿ ಇರಿತ - ಮೂವರು ಖದೀಮರು ಅರೆಸ್ಟ್

ಮಂಗಳೂರು: ನಗರದ ಹೊರವಲಯದ ದ್ವಿಚಕ್ರ ವಾಹನದಲ್ಲಿ ಬಜ್ಜೆಗೆ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ತಂಡವೊಂದು ದಾಳಿ ನಡೆಸಿ ಓರ್ವನಿಗೆ ಡ್ರ್ಯಾಗರ್ ಮೂಲಕ ಇರಿದಿರುವ ಘಟನೆ ರವಿವಾರ ರಾತ್ರಿ ಕಳವಾರು ಎಂಬಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ (23) ಇರಿತದಿಂದ ಗಾಯಗೊಂಡ ಯುವಕ. ಕಳವಾರು ನಿವಾಸಿ ಯಜ್ಞೇಶ್ (22), ಪ್ರಶಾಂತ್(28), ಧನ್ ರಾಜ್(23) ಬಂಧಿತ ಆರೋಪಿಗಳು. ಅಬ್ದುಲ್ ಸಫ್ವಾನ್ ಅವರ ಕೈ ಮತ್ತು ಕತ್ತಿಗೆಗೆ ಚುಚ್ಚಿದ ಗಾಯಗಳಾಗಿದೆ. ಅವರನ್ನು ‌ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಬ್ದುಲ್ ಸಫ್ವಾನ್ ಹಾಗೂ ಅವರ ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಸ್ತಿ ಬಳಿ ಅಡ್ಡಗಟ್ಟಿದ ಕೆಲವು ಮಂದಿಯಿದ್ದ ತಂಡ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಡ್ರಾಗರ್‌ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ಸಿಕ್ಕಿದ ತಕ್ಷಣ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅಬ್ದುಲ್ ಸಫ್ವಾನ್ ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಲದಿನಗಳ ಹಿಂದೆ ಬಜ್ಪೆಯ ಕಳವಾರು ಭಾಗದಲ್ಲಿ ಮದ್ಯ ವ್ಯಸನಿಯೋರ್ವ ಹಲ್ಲೆ ನಡೆಸಿದ್ದ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಆತನಿಗೆ ನ್ಯಾಯಾಂಗ ಬಂಧನವಾಗಿದೆ. ಇದರ ದ್ವೇಷದಿಂದ ಚೂರಿ ಇರಿತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕೆಎಸ್‌ಆರ್‌ಪಿಯ ಒಂದು ತುಕಡಿ, ಎರಡು ಹೊಯ್ಸಳ ವಾಹನಗಳು ಹಾಗೂ ಘಟನಾ ಸ್ಥಳದ ಸಮೀಪದಲ್ಲಿ ಮತ್ತು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಆಯಾಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 


BREAKING NEWS
Loading latest news...
Join our WhatsApp Channel Powered By : Online Pudu