ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿತ್ತು 100ಕೋಟಿ ರೂ. ಚೆಕ್


ಸಿಂಹಾಚಲಂ: ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂದಲ್ಲಿರುವ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಚೆಕ್ ಸಿಕ್ಕಿದೆ. ಇಷ್ಟೊಂದು ಮೊತ್ತದ ಚೆಕ್ ನೋಡಿ ದೇವಾಲಯದ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.

ಪ್ರತಿ 15 ದಿನಕ್ಕೊಮ್ಮೆ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಹುಂಡಿಯ ಎಣಿಕೆ ಕಾರ್ಯ ನಡೆಯುತ್ತದೆ. ಪ್ರತಿಬಾರಿಯಂತೆ ಈ ಬಾರಿಯೂ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಪಾರ ಪ್ರಮಾಣದ ಕಾಣಿಕೆಯೊಂದು ಪತ್ತೆಯಾಗಿದೆ. ಅದು ಒಂದೆರಡಲ್ಲ, ಬರೋಬ್ಬರಿ 100 ಕೋಟಿ ರೂಪಾಯಿ ಚೆಕ್. ಭಕ್ತರೊಬ್ಬರು 100 ಕೋಟಿ ರೂಪಾಯಿ ಚೆಕ್ ಬರೆದು ಹುಂಡಿಗೆ ಹಾಕಿದ್ದಾರೆ. ಆದರೆ ಅಚ್ಚರಿ, ಅನುಮಾನಗೊಂಡ ದೇವಾಲಯದ ಸಿಬ್ಬಂದಿ ಚೆಕ್ ಅನ್ನು ಪರಿಶೀಲಿಸಿಲು ಬ್ಯಾಂಕ್ ಗೆ ಕೊಟ್ಟಿದ್ದಾರೆ.


ಈ ಚೆಕ್ ನಲ್ಲಿ ಮೊದಲು 10 ರೂಪಾಯಿ ಎಂದು ಬರೆದು ಮತ್ತೆ 100 ಕಂಡುಬಂದಿದೆ. ತಮಾಷೆಗಾಗಿ ಈ ರೀತಿ ಮಾಡಿರಬಹುದೇ ಎಂದು ಯೋಚಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳಲು ಚೆಕ್ ಮೇಲಿನ ವಿವರಗಳ ಆಧಾರದ ಮೇಲೆ ಪರಿಶೀಲಿಸಿದ್ದಾರೆ. ಅದು ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬವರ ಉಳಿತಾಯ ಖಾತೆಗೆ ಸೇರಿದ್ದು ಎಂದು ತಿಳಿದು ಬಂದಿದೆ. ಉಳಿತಾಯದ ಖಾತೆಯಿಂದ 100 ಕೋಟಿ ರೂಪಾಯಿ ನೀಡಲು ಸಾಧ್ಯವೇ? ಎಂದು ಅನುಮಾನಿಸಿದ ಅಧಿಕಾರಿಗಳು ಬ್ಯಾಂಕ್ ಗೆ ಹೋಗಿ ಪರಿಶೀಲಿಸಿದ್ದಾರೆ. ಬ್ಯಾಂಕ್ ಖಾತೆ ಪರಿಶೀಲಿಸಿದರೆ ಆ ಖಾತೆಯಲ್ಲಿ ಕೇವಲ 17 ರೂಪಾಯಿ ಇತ್ತು. ಆರಂಭದಲ್ಲಿ 100 ಕೋಟಿ ಚೆಕ್ ಕಂಡು ಅಚ್ಚರಿಗೊಳಗಾಗಿದ್ದ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲಿರುವ ಹಣ ನೋಡಿ ಅಕ್ಷರಶಃ ಶಾಕ್ ಆಗಿದ್ದಾರೆ. ಆದ್ದರಿಂದ ಚೆಕ್ ಹಿಂದಿನ ವ್ಯಕ್ತಿ ಪತ್ತೆಗೆ ಮುಂದಾಗಿದ್ದು, ತಮಾಷೆಗಾಗಿಯೂ ಈ ರೀತಿ ದುರ್ವತನೆ ಮಾಡಬಾರದು ಎಂದು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu