ಆಳ್ವಾಸ್ ಪದವಿ ಪೂರ್ವ ಕಾಲೇಜು: ಪ್ರತಿಭಾ ಪುರಸ್ಕಾರ




ವಿದ್ಯಾಗಿರಿ: ‘ ನಾಲ್ಕು ಗೋಡೆಗಳ ನಡುವೆ ಕಲಿತ ಜ್ಞಾನದ ಜತೆಗೆ, ದಿನ ನಿತ್ಯದ ಜೀವನದಲ್ಲಿ ಸಿಗುವ ಜೀವಾನಾನುಭ ಬದುಕಿಗೆ ಭದ್ರ ಬುನಾಧಿಯನ್ನು ಹಾಕುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. 

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ತಂಡ ಅಥವಾ ವ್ಯವಸ್ಥೆಯಲ್ಲಿ ಒಂದಾಗಿ ಮುನ್ನಡೆಸುವುದೇ ನಾಯಕತ್ವ. ವ್ಯವಸ್ಥೆಯಿಂದ ಹೊರಗುಳಿಯುವವ ನಾಯಕನಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರುವವರೇ ನೈಜ ನಾಯಕರು. ಅವರು ವೇದಿಕೆಗಿಂತ ಹೆಚ್ಚಾಗಿ, ಜನರ ಮಧ್ಯೆ ಇರುತ್ತಾರೆ. ಜನರ ಜೊತೆ ಬೆರೆತು ಹೋಗಿರುತ್ತಾರೆ. ಮಾದರಿ ಬದುಕನ್ನು ಜೀವಿಸುತ್ತಾರೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಷ್ಟçಪತಿ ದ್ರೌಪತಿ ಮುರ್ಮು ಮತ್ತಿತರರು ಇಂತಹ ಮಾದರಿ ನಾಯಕರು ಎಂದು ಅವರು ವಿವರಿಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರೂ ಅಂತಹ ಹೆಜ್ಜೆ ಇಟ್ಟು ಮುನ್ನಡೆದು, ಜೊತೆ ಬಂದವರನ್ನು ಮುನ್ನಡೆಸಿದ್ದಾರೆ. ಇದಕ್ಕೆ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳೇ ಸಾಕ್ಷಿ. ‘ಆಳ್ವಾಸ್’ ಬ್ರಾಂಡ್ ಅಗಲು ಅವರ ಜೊತೆಗಿನ ನಿಮ್ಮೆಲ್ಲರ ಶ್ರಮವೇ ಕಾರಣ’ ಎಂದರು. 

ಬದುಕಿನಲ್ಲಿ ತುಡಿತವಿದ್ದು, ಶಿಸ್ತು, ಸಮಯಕ್ಕೆ ನ್ಯಾಯ ನೀಡಿದರೆ ಮಾತ್ರ ಯಶಸ್ಸು ನಿಮ್ಮೊಂದಿಗೆ ಬರುತ್ತದೆ. ನಮ್ಮ ಬೇರುಗಳು ಸಂಸ್ಕೃತಿಯ ಆಳಕ್ಕಿಳಿದಾಗ ಮಾತ್ರ ಬದುಕು ಹಸನಾಗುತ್ತದೆ. ಅನುಭವ ನಮ್ಮನ್ನು ಪಕ್ವಗೊಳಿಸುತ್ತದೆ ಎಂದು ವಿಶ್ಲೇಷಿಸಿದರು.  

‘ಅಸಮರ್ಥ’ ಎಂಬ ಆಲೋಚನೆಯನ್ನೂ ಮಾಡಬಾರದು. ಇಂತಹ ಕೀಳರಿಮೆಗಳೇ ಬದುಕಿನಲ್ಲಿ ಅಸಮರ್ಥರಾಗಿಸಿ ಬಿಡುತ್ತವೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಮಾತನಾಡಿ,  ‘ಕಳೆದ 2 ವರ್ಷಗಳಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 767 ವಿದ್ಯಾರ್ಥಿಗಳು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ನಾವು ಶೇ100 ಯಶಸ್ಸು ಬಯಸುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇದ್ದೇವೆ. ಇಲ್ಲಿ ಶೇ 99.99 ಸಾಧನೆಯೂ ಯಶಸ್ಸಾಗುವುದಿಲ್ಲ’ ಎಂದರು. 

ಹದಿಹರೆಯದ ಸಮಸ್ಯೆಗಳನ್ನು ಮೀರಲು ಶಿಸ್ತು ಹಾಗೂ ಬದ್ಧತೆ ಮುಖ್ಯ. ಯಾವುದೇ ಪ್ರಲೋಭನೆಗೆ ಒಳಗಾಗಬೇಡಿ. ನಿಮ್ಮಲ್ಲಿನ ಶಕ್ತಿಯನ್ನು ಒಳ್ಳೆಯ ಮಾರ್ಗದಲ್ಲಿ ಬಳಸಿಕೊಳ್ಳಿ ಎಂದರು.  

ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಇದ್ದರು. ಉಪನ್ಯಾಸಕಿ ಉಷಾ ಬಿ. ಸ್ವಾಗತಿಸಿದರು. ದಿವ್ಯಾ ಡೆಂಬಳ ನಿರೂಪಿಸಿದರು. ಬಹಮಾನ ವಿಜೇತರ ಪಟ್ಟಿಯನ್ನು ಉಪನ್ಯಾಸಕಿಯರಾದ ಅಮೃತಾ, ಭವ್ಯ, ವೇದ ಓದಿದರು. ಉಪನ್ಯಾಸಕ ಧರ್ಮೇಂದ್ರ ಕುದ್ರೋಳಿ ವಂದಿಸಿದರು. 






BREAKING NEWS
Loading latest news...
Join our WhatsApp Channel Powered By : Online Pudu