ಮಂಗಳೂರು: 26ರ ವಿವಾಹಿತ ಯುವತಿ ಆತ್ಮಹತ್ಯೆಗೆ ಶರಣು; ಸಿಲ್ಲಿ ಕಾರಣ?

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮನನೊಂದ ವಿವಾಹಿತ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ನಡೆದಿದೆ.

ಬಾಳ ನಿವಾಸಿ ದಿವ್ಯಾ(26) ಆತ್ಮಹತ್ಯೆಗೆ ಶರಣಾದ ಯುವತಿ.

ದಿವ್ಯಾ ಬಾಳ ನಿವಾಸಿ ಹರೀಶ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರ ವಿವಾಹ 2022ರ ಮಾರ್ಚ್ ನಲ್ಲಿ ನಡೆದಿತ್ತು. ಇವರ ವೈವಾಹಿಕ ಜೀವನದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ಈ ದಂಪತಿ ಜ.22ರಂದು ನೆರೆಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾರೆ. ಅಲ್ಲಿ ಊಟ ಮುಗಿಸಿದ ಬಳಿಕ 'ಮನೆಗೆ ಹೋಗುವ' ಎಂದು ದಿವ್ಯಾ ಪತಿಯನ್ನು ಒತ್ತಾಯಿಸಿದ್ದಾರೆ. ಆದರೆ ಪತಿ ಹರೀಶ್ ಆಗಲೇ ಅಲ್ಲಿಂದ ಹೊರಡಲು ಒಪ್ಪಲಿಲ್ಲ.

ಆದ್ದರಿಂದ ದಿವ್ಯಾ ಓರ್ವಳೇ ಮನೆಗೆ ಬಂದಿದ್ದಾರೆ. ಇದೇ ವಿಚಾರದಲ್ಲಿ ಮನನೊಂದ ದಿವ್ಯಾ ಮನೆಯ ಬೆಡ್ ರೂಂನ ಕಿಟಕಿಗೆ ತಮ್ಮ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಈ ಬಗ್ಗೆ ದಿವ್ಯಾ ತಾಯಿ ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ದೂರು  ದಾಖಲಿಸಿದ್ದಾರೆ. ಆದರೆ ಸುರತ್ಕಲ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.