ಮಂಗಳೂರು: ದೈವಸ್ಥಾನಕ್ಕಿಟ್ಟಿದ್ದ ಕಾಣಿಕೆ ಡಬ್ಬಿ ಕಳವುಗೈದ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

ಮಂಗಳೂರು: ಹೊಟೇಲ್ ಕ್ಯಾಶ್ ಕೌಂಟರ್ ನಲ್ಲಿ ದೇವಸ್ಥಾನಕ್ಕೆಂದು ಇಟ್ಟಿದ್ದ ಕಾಣಿಕೆ ಡಬ್ಬಿ ಕಳವುಗೈದಿರುವ ವ್ಯಕ್ತಿಯೊಬ್ಬನ ಮೇಲಿನ ಆರೋಪ ಮಂಗಳೂರಿನ 2ನೇ ಸಿ.ಜೆ.ಎಂ ನ್ಯಾಯಾಲಯದಲ್ಲಿ ಸಾಬೀತುಗೊಂಡ ಹಿನ್ನಲೆಯಲ್ಲಿ 1 ವರ್ಷ ಕಾರಾಗೃಹ ವಾಸ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.

ಬಂಟ್ವಾಳ ತಾಲೂಕಿನ ಕುಕ್ಕಾಜೆ ಬೈಲು ಮನೆ ಇರಾ ಗ್ರಾಮದ ಮೊಹಮ್ಮದ್‌ ಆಸೀಫ್ ಕುಕ್ಕಾಜೆ(28) ಶಿಕ್ಷೆಗೊಳಗಾದ ಅಪರಾಧಿ. ಈತ ಹಾಗೂ ಬಂಟ್ವಾಳ ತಾಲೂಕಿನ ಕುಕ್ಕಾಜೆ ಮಂಚಿಕಟ್ಟೆ ಮನೆಯ ಮಹಮ್ಮದ್ ಇಲಿಯಾಸ್ @ ಅಳಿಯ (30), 2021ರ ಮಾರ್ಚ್ 15ರ ಮಧ್ಯಾಹ್ನ 2ಗಂಟೆಗೆ ನಗರದ ಕಂಕನಾಡಿಯ ಕೆ.ಆರ್.ಕಾಂಪ್ಲೆಕ್ಸ್‌ನ 1ನೇ ಮಹಡಿಯಲ್ಲಿರುವ ಐಸಿರಿ ಎಂಬ ಹೋಟೆಲ್‌ನ ಕ್ಯಾಶ್ ಕೌಂಟರ್‌ನಲ್ಲಿದ್ದ ಕಂಕನಾಡಿ ಪಡುಮಲೆ ಕಲ್ಲುರ್ಟಿ ದೇವಸ್ಥಾನಕ್ಕೆಂದು ಇಟ್ಟಿರುವ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದರು.

ಈ ಬಗ್ಗೆ ಹೊಟೇಲ್ ಮಾಲಿಕ ನವೀನ್‌ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಅಂದಿನ ಪೊಲೀಸ್ ಉಪನಿರೀಕ್ಷಕ ಜ್ಞಾನಶೇಖರ್ ತನಿಖೆ ನಡೆಸಿ ಆರೋಪಿ ಮಹಮ್ಮದ್ ಆಸೀಫ್ ಕುಕ್ಕಾಜೆಯಿಂದ ಕಳವು ಮಾಡಿದ ಕಾಣಿಕೆ ಡಬ್ಬಿ ಹಾಗು ಕಾಣಿಕೆ ಡಬ್ಬಿಯಲ್ಲಿದ್ದ  705.50 ರೂ.ವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಎಲ್ಲಾ ಸಾಕ್ಷಿಧಾರರ ವಿಚಾರಣೆ ನಡೆಸಿ ವಾದ ವಿವಾದವನ್ನು ಆಲಿಸಿದ ಮಾನ್ಯ 2ನೇ ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಕೆ. ಅವರು 1ನೇ ಆರೋಪಿ ಮೊಹಮ್ಮದ್ ಆಸೀಫ್ ಕುಕ್ಕಾಜೆ ತಪ್ಪಿತಸ್ಥನೆಂದು ನಿರ್ಣಯಿಸಿ 1 ವರ್ಷ ಜೈಲು ಶಿಕ್ಷೆ ಮತ್ತು ರೂ 2000 ರೂ. ದಂಡ ವಿಧಿಸಿದೆ‌. ದಂಡ ಪಾವತಿಸಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸತಕ್ಕದೆಂದು ಆದೇಶಿಸಿರುತ್ತಾರೆ. ಈ ಪ್ರಕರಣದಲ್ಲಿ 2ನೇ ಆರೋಪಿ ಮಹಮ್ಮದ್ ಇಲಿಯಾಸ್ @ ಅಳಿಯ ಸಾಕ್ಷ್ಯಧಾರದ ಕೊರತೆಯಿಂದ ಬಿಡುಗಡೆಯಾಗಿದ್ದಾನೆ.

ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್.ಬಿ ವಾದ ಮಂಡಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu