ಬೀದಿಬದಿಯಲ್ಲಿ ತರಕಾರಿ ಖರೀದಿಸಿ ವ್ಯಾಪಾರಿಗಳ ಕುಂದುಕೊರತೆ ಆಲಿಸಿದ ಕೇಂದ್ರ ವಿತ್ತ ಸಚಿವೆ; ವೀಡಿಯೋ ವೈರಲ್

ಚೆನ್ನೈ: ಚೆನ್ನೈನ ಮೈಲಾಪುರ ಪ್ರದೇಶದಲ್ಲಿ ಬೀದಿ ಬದಿಯಲ್ಲಿ ಕೇಂದ್ರದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ತರಕಾರಿ ಖರೀದಿಸಿರುವ ವೀಡಿಯೋವನ್ನು ಅವರ ಅಧಿಕೃತ ಕಚೇರಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. 

ಈ ವೇಳೆ ನಿರ್ಮಲಾ ಸೀತಾರಾಮನ್ ಅವರು ತರಕಾರಿ ಖರೀದಿಸಿದ್ದಲ್ಲದೆ, ವ್ಯಾಪಾರಿಗಳ ಕುಂದು ಕೊರತೆಗಳನ್ನು ಸಹ ಆಲಿಸಿದ್ದಾರೆಂದು ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ. ವ್ಯಾಪಾರಿಗಳೊಂದಿಗೆ ಮಾತನಾಡಿರುವ ಫೋಟೋಗಳನ್ನು ಸಹ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ನಿರ್ಮಲಾ ಸೀತಾರಾಮನ್ ಸಿಹಿ ಗೆಣಸನ್ನು ಆಯ್ದುಕೊಳ್ಳುತ್ತಿರುವ ದೃಶ್ಯ ವೀಡಿಯೋದಲ್ಲಿದಲ್ಲಿದ್ದರೆ, ಫೋಟೋದಲ್ಲಿ ಹಾಗಲಕಾಯಿಯನ್ನು ತೆಗೆದುಕೊಳ್ಳುತ್ತಿರುವ ದೃಶ್ಯವಿದೆ. ಅಲ್ಲದೆ ಮಹಿಳಾ ವ್ಯಾಪಾರಿಗಳೊಂದಿಗೆ ನಿರ್ಮಲಾ ಸಂವಾದ ನಡೆಸಿದ್ದಾರೆ. ಅದೇ ದಿನ ಬೆಳಗ್ಗೆ ನಿರ್ಮಲಾ ಅವರು ನಗರದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕೇಂದ್ರವನ್ನು ಉದ್ಘಾಟನೆ ಮಾಡಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಲ್ಲಿ ತರಕಾರಿಗಳು ಪ್ರಮುಖ ಅಂಶಗಳಾಗಿವೆ. ನಿರ್ಮಲಾ ಸೀತಾರಾಮನ್ ಅವರು ಗಮನವಹಿಸಬೇಕಾದ ಅಂಶಗಳಲ್ಲಿ ತರಕಾರಿಗಳು ಕೂಡಾ ಇದೆ. ಏಕೆಂದರೆ , ತರಕಾರಿಗಳ ಬೆಲೆ ಹೆಚ್ಚಾಗುತ್ತಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

ಅಂದಹಾಗೆ ಚಿಲ್ಲರೆ ದೇಶ ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಶೇ.7 ರಷ್ಟಿದೆ . ಹಣದುಬ್ಬರ ಪ್ರಮಾಣವು ಶೇ.6 ರೊಳಗೆ ಇರಬೇಕು ಎನ್ನುವುದು ಆರ್‌ಬಿಐ ಗುರಿ. ಆದರೆ , ರಷ್ಯಾ - ಯೂಕ್ರೇನ್ ಸಂಘರ್ಷದಿಂದ ಹಣದುಬ್ಬರದ ಗುರಿಯನ್ನು ಆರ್‌ಬಿಐ ತುಸು ಹಿಗ್ಗಿಸಿದೆ. ಈ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡೇ ಆರ್‌ಬಿಐ ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಸಾಲದ ಮೇಲಿನ ಬಡ್ಡಿ ದರವನ್ನು 50 ಮೂಲಾಂಶ ಹೆಚ್ಚಳ ಮಾಡಿದೆ . ಇದರಿಂದ ರೆಪೊ ದರ ಶೇ.‌ 5.90 ಕ್ಕೆ ತಲುಪಿದೆ .