ಮಂಗಳೂರು: ಮೊಟ್ಟೆ , ಶಾಲೆಯ ಮಕ್ಕಳ ಬಿಸಿಯೂಟದಲ್ಲಿ ಹಣ ಮಾಡಿರುವ ಕಾಂಗ್ರೆಸ್ ಮತ್ತೊಂದು ಸರಕಾರವನ್ನು 40% ಸರಕಾರವೆಂದು ಹೇಗೆ ಹೇಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, 40% ಕಮಿಷನರ್ ವಿಚಾರದಲ್ಲಿ ಅವರಲ್ಲಿ ಸಾಕ್ಷಿಗಳೇನಿದೆ?. ಜಯಮಾಲಾ, ಕಾಂಗ್ರೆಸ್ ಗೆ ಹಣ ಕೊಡಲೆಂದೇ ಮೊಟ್ಟೆಯಲ್ಲಿ ಹಣ ಮಾಡಿದವರು. ಅದರ ದಾಖಲೆ ನಮ್ಮಲ್ಲಿದೆ. ಕಾಂಗ್ರೆಸ್ ಪಕ್ಷ 80% ಸರಕಾರ. ಅವರು ನೆರೆ ಸಂಗ್ರಹದ ಹಣವನ್ನೇ ಲೂಟಿ ಮಾಡಿದವರು. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ದಲ್ಲಿ 40% ಗೆ ಸಾಕ್ಷಿ ಪುರಾವೆ ಒದಗಿಸಲಿ. ಕೆಂಪಣ್ಣ ಸುಮ್ಮನೆ ಮಾತನಾಡುವ ಬದಲು ಪುರಾವೆ ಕೊಡಲಿ ಎಂದರು.
ಮಾಜಿ ಸಚಿವ ಈಶ್ವರಪ್ಪರಿಗೆ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಭದ್ರತೆ ಕೊಡುತ್ತದೆ. ಈದ್ಗಾ ಮೈದಾನ ಸರ್ಕಾರದ ಸ್ಥಳವಾಗಿದ್ದು, ಅಲ್ಲಿ ಗಣೇಶನ ಪ್ರತಿಮೆ ಇಡಲು ಅವಕಾಶವಿದೆ. ಸ್ಥಳೀಯಾಡಳಿತಕ್ಕೆ ಅರ್ಜಿ ಕೊಟ್ಟಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗುತ್ತದೆ. ಸರ್ಕಾರಿ ಜಾಗದಲ್ಲಿ ಗಣೇಶೋತ್ಸವ ಮಾಡಲು ಬಿಡುವುದಿಲ್ಲ ಎಂದು ಹೇಳುವುದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ ಬೇಕು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.