
ಮಂಗಳೂರು: ಕಪಿಲ ಗೋಶಾಲೆಯ ಜಾನುವಾರು ಕಳವುಗೈದ ಆರೋಪಿ ಅರೆಸ್ಟ್
4/11/2022 02:24:00 AM
ಮಂಗಳೂರು: ನಗರದ ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲೆಯ ಮೂರು ಜಾನುವಾರುಗಳನ್ನು ಕಳವುಗೈದ ಆರೋಪಿಯೊಬ್ಬನನ್ನು ಬಜ್ಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಂಗಳೂರು ಜೋಕಟ್ಟೆ ನಿವಾಸಿ, ಪ್ರಸ್ತುತ ಬಜ್ಪೆ ಭಟ್ರಕೆರೆ ನಿವಾಸಿ ಮಹಮ್ಮದ್ ರಾಝಿಕ್ (19) ಬಂಧಿತ ಆರೋಪಿ.
ನಗರದ ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಜಾನುವಾರುಗಳಲ್ಲಿ ಒಂದು ಹೋರಿ ಹಾಗೂ 2 ಕಪಿಲ ತಳಿಯ ಹಸುಗಳನ್ನು ಗೋಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಓರ್ವ ಆರೋಪಿ ಮಹಮ್ಮದ್ ರಾಝಿಕ್ ನನ್ನು ಕೆಂಜಾರು ಮರವೂರಿನಲ್ಲಿ ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.