-->

'ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ': ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ವೀಡಿಯೋ ವೈರಲ್

'ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ': ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ವೀಡಿಯೋ ವೈರಲ್

ಮಂಗಳೂರು: 'ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ' ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆಯ ವೀಡಿಯೋ ತುಣುಕು ವೈರಲ್ ಆಗುತ್ತಿದೆ.

ಹರ್ಷ ಹತ್ಯೆಯನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಹರೀಶ್ ಪೂಂಜಾ ತುಳುಭಾಷೆಯಲ್ಲಿ ಭಾಷಣ ಮಾಡಿರುವ ವೀಡಿಯೋ ತುಣುಕು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅವರು, ಕಾಂಗ್ರೆಸ್ ನ ಷಡ್ಯಂತರದಿಂದ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಕಾಂಗ್ರೆಸ್ ನ ಪ್ರೇರಣೆಯ ಕುಮ್ಮಕ್ಕಿನಿಂದ ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಯಾಗಿದೆ. ಆದರೆ ಹಿಂದೂ ಸಮಾಜದ ರಕ್ಷಣೆಗಾಗಿ ಕೋಟ್ಯಂತರ ಹರ್ಷರು ಮತ್ತೆ ಹುಟ್ಟಿ ಬಂದು ಸಮಾಜಘಾತುಕ ಶಕ್ತಿಗಳ ಮೇಲೆ ಹೋರಾಟ ಮಾಡುವುದು ಖಂಡಿತಾ ಎಂದು ಹೇಳಿದರು.




ಈಶ್ವರಪ್ಪನವರು ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಾಟ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಅಧಿವೇಶನ ಮೊಟಕುಗೊಳಿಸುವ ಕಾರ್ಯವಾಗಿದೆ. ಆದರೆ ಬೆಳ್ತಂಗಡಿ ಶಾಸಕನಾಗಿ ನಾನು ಹೇಳುತ್ತೇನೆ ಹಿಂದೂ ಸಮಾಜವು ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಹಾರಿಸುತ್ತದೆ. ಆದರೆ ಈ ಭಗವಾಧ್ವಜವನ್ನು ರಾಷ್ಟ್ರಧ್ವಜದ ಕೆಳಗೆ ಹಾಯಿಸಲಾಗುತ್ತದೆ. ಇದನ್ನು ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಇದು ಬಿಜೆಪಿ ಹಾಗೂ ಹಿಂದೂ ಸಮಾಜದ ಸಂಕಲ್ಪ ಎಂದರು.

ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕಾದರೆ ಬಾಲಗಂಗಾಧರ ತಿಲಕ್ ಭಗವಾಧ್ವಜವನ್ನು ಎದರಿಟ್ಟುಕೊಂಡು ಹೋರಾಟ ಮಾಡಿದ್ದರು‌. ಅದಕ್ಕಿಂತ ಮೊದಲು ಹಿಂದೂ ಸಮಾಜಕ್ಕೆ ಶಕ್ತಿ ತುಂಬಲು ಶಿವಾಜಿ ಮಹಾರಾಜರು ಅವರ ರಥದ ಮೇಲೆ ಭಗವಾಧ್ವಜ ಹಾರಿಸಿದ್ದರು. ಸನಾತನವಾದ ಈ ದೇಶಕ್ಕೆ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಲು ಭಗವಾಧ್ವಜ ಪ್ರೇರಣೆ ನೀಡಿದೆ. ಈ ಭಗವಾಧ್ವಜ ಸಮಸ್ತ ಹಿಂದೂ ಸಮಾಜದ ಪ್ರೇರಣೆಯ ಸಂಕೇತ. ಇದನ್ನು ಸದಾ ಘಂಟಾಘೋಷವಾಗಿ ಹಿಂದೂ ಸಮಾಜ ಹೇಳುತ್ತದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article