ಹೊಸದಿಲ್ಲಿ: ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕಿಯ ಅಪಹರಿಸಿ 'ಹತ್ಯಾಚಾರ': ಶಂಕಿತ ಕಾಮುಕರಿಬ್ಬರ ಬಂಧನ

ಹೊಸದಿಲ್ಲಿ: ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಪ್ಲಾಸ್ಟಿಕ್ ಟೊಪ್ಪಿ ತಯಾರಿಕಾ ಘಟಕದಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯವೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 

ಬಹಳ ಖೇದಕರ ಸಂಗತಿಯೆಂದರೆ ಬಾಲಕಿ ತೊಟ್ಟಿರುವ ಬಟ್ಟೆಯಿಂದಲೇ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯು ಫೆಬ್ರವರಿ 12ರಂದು ರಾತ್ರಿ ದೆಹಲಿಯ ನರೇಲಾ ಕೈಗಾರಿಕಾ ಪ್ರದೇಶದ ಬಳಿಯ ಗ್ರಾಮದಲ್ಲಿ ಸಂಭವಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಗೆ ಅತ್ಯಾಚಾರ ಎಸಗಿರುವ ಶಂಕಿತರಿಬ್ಬರ ಪರಿಚಯವಿತ್ತು ಹಾಗೂ ಈ ವಿಚಾರವನ್ನು ತನ್ನ ತಂದೆಯ ಬಳಿ ಹೇಳುವುದಾಗಿ ಬಾಲಕಿ ಹೇಳಿರುವ ಹಿನ್ನೆಲೆಯಲ್ಲಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. 

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಬಳಿಕ‌ ಕಾಮುಕರು ಬಾಲಕಿಯ ಮೃತದೇಹವನ್ನು ಸೆಗಣಿ ಬೆರಣಿಯಡಿ ಹುದುಗಿಸಿಟ್ಟು, ಅಂಗಡಿ ಮಳಿಗೆಗೆ ಬೀಗ ಜಡಿದು ಪರಾರಿಯಾಗಿದ್ದರು. ಅಂಗಡಿಯ ಮಾಲಕ ಉತ್ತರ ಪ್ರದೇಶದ ಹರ್ದೋಯಿಗೆ  ತೆರಳಿ ವಾರದ ಬಳಿಕ ವಾಪಸ್ ಆದ ಸಂದರ್ಭ ಅಂಗಡಿಯ ‌ಒಳಗಿನಿಂದ ಕೆಟ್ಟ ವಾಸನೆ ಬಂದಿದೆ. ಅಂಗಡಿ ತೆರೆದು ನೋಡಿದ ಸಂದರ್ಭ ಅರ್ಧ ಕೊಳೆತ ಬಾಲಕಿಯ ದೇಹ ಪತ್ತೆಯಾಗಿದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿರುವ ಪೊಲೀಸರು ರವಿವಾರ ರಾತ್ರಿ ಮುಂಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎರಡನೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇಬ್ಬರೂ ಶಂಕಿತರು ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu